Publish Date: Thu, 04 Nov 2021 (21:37 IST)
Updated Date: Thu, 04 Nov 2021 (21:44 IST)
ಬೆಂಗಳೂರು: ಚಾಕೋಲೆಟ್ ಆಸೆ ತೋರಿಸಿ ಮಕ್ಕಳನ್ನು ಅಪಹರಿಸಲು ಖದೀಮರು ವಿಫಲ ಯತ್ನ ನಡೆಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರಣ್ಯಪುರದ ಅಪಾರ್ಟ್ಮೆಂಟ್ವೊಂದರ ಬಳಿ ಘಟನೆ ನಡೆದಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಕ್ಕಳ ಅಪಹರಣ ತಪ್ಪಿದೆ. ಮೂವರು ಅಪರಿಚಿತರು ಅಪಹರಣ ಮಾಡಲು ಯತ್ನಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಘಟನೆ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಮಕ್ಕಳು ಮನೆ ಸಮೀಪ ಆಟ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮೂವರು ಅಪರಿಚಿತ ವ್ಯಕ್ತಿಗಳು, ಮಕ್ಕಳಿಗೆ ಚಾಕೋಲೆಟ್ ಕೊಡಿಸುವುದಾಗಿ ಆಸೆ ತೋರಿಸಿದ್ದಾರೆ. ಆಗ ಒಬ್ಬ ಬಾಲಕ ಖದೀಮರ ಹಿಂದೆ ಹೋಗಲು ಯತ್ನಿಸಿದ್ದಾನೆ. ಅನಂತರ ಮತ್ತೊಬ್ಬ ಅಪರಿಚಿತ ವ್ಯಕ್ತಿ ಅಲ್ಲಿದ್ದ ಐದಾರು ಮಕ್ಕಳಿಗೂ ಚಾಕೊಲೆಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ಯಲು ಯತ್ನಿಸಿದ್ದಾನೆ. ಅಪರಿಚಿತನ ಹಿಂದೆ ಮಕ್ಕಳು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಭಯದಲ್ಲಿ ಮೂವರು ಅಪರಿಚಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.