Publish Date: Tue, 30 Sep 2025 (08:51 IST)
Updated Date: Tue, 30 Sep 2025 (08:53 IST)
ಬೆಂಗಳೂರು: ರಾಜ್ಯಾದ್ಯಂತ ಕಳೆದ ವಾರ ಸಾಧಾರಣ ಮಳೆಯಾಗಿತ್ತು. ಈ ವಾರ ಮಳೆಯ ಅಬ್ಬರ ಕಡಿಮೆ ಎಂದು ವರದಿಯಾಗಿದ್ದರೂ ಇಂದು ಈ ಕೆಲವು ಜಿಲ್ಲೆಗಳಿಗೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಎಚ್ಚರಿಕೆ ನೀಡಿವೆ.
ಕಳೆದ ವಾರ ಬೆಂಗಳೂರು, ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿತ್ತು. ಆದರೆ ಈ ವಾರ ಕೆಲವು ಜಿಲ್ಲೆಗಳು ಬಿಟ್ಟರೆ ಉಳಿದ ಜಿಲ್ಲೆಗಳಿಗೆ ಅಷ್ಟೊಂದು ಮಳೆಯ ಅಬ್ಬರ ಸಾಧ್ಯತೆ ಕಂಡುಬರುತ್ತಿಲ್ಲ.
ವಿಶೇಷವಾಗಿ ಈ ವರ್ಷ ಅತೀ ಹೆಚ್ಚು ಮಳೆ ಸುರಿದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉಡುಪಿಯಲ್ಲಿ ಗುಡುಗು ಅಬ್ಬರವಿರಲಿದ್ದು, ಮಳೆಯ ಸಾಧ್ಯತೆ ಕಡಿಮೆ.
ಉಳಿದಂತೆ ಬೆಂಗಳೂರು, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ಅಥವಾ ಬಿಸಿಲಿನ ವಾತಾವರಣವಿರಲಿದೆ.