Publish Date: Thu, 10 Jan 2019 (18:57 IST)
Updated Date: Thu, 10 Jan 2019 (18:59 IST)
ದುಬಾರಿ ಬಡ್ಡಿಗೆ ಒತ್ತಾಯ ಮಾಡಿ ಕೊಲೆಗೆ ಯತ್ನಿಸಿದ ಶ್ರೀಹರಿ ಎಂಟರ್ಪ್ರೈಸಸ್ನ ಮಾಲೀಕ ಉದಯ್ ಶೆಟ್ಟಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪಿಸ್ತೂಲ್, 4 ಗುಂಡುಗಳು, ಜಿಂಕೆ ಕೊಂಬುಗಳು, ಆಸ್ತಿ-ಪಾಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಲ್ಸನ್ ಗಾರ್ಡನ್ನ 4ನೇ ಕ್ರಾಸ್ನ ಉದಯ್ ಗೋಪಾಲ್ ಶೆಟ್ಟಿ (54), ಶ್ರೀಹರಿ ಎಂಟರ್ಪ್ರೈಸಸ್ ನಡೆಸುತ್ತಿದ್ದು, ಬಡ್ಡಿಗೆ ಹಣ ನೀಡುತ್ತಿದ್ದ. ಸಂಜಯ್ ನಗರದ ಅಬ್ದುಲ್ ರೆಹಮಾನ್ ಎಂಬುವವರಿಗೆ ಸಾಲವಾಗಿ ಹಣ ನೀಡಿದ್ದು, ಅಸಲು, ಬಡ್ಡಿಯನ್ನು ತೀರಿಸಿದ್ದರೂ, ದುಬಾರಿ ಬಡ್ಡಿಗೆ ಕಿರುಕುಳ ನೀಡುತ್ತಿದ್ದ.
ದುಬಾರಿ ಬಡ್ಡಿ ನೀಡದಿದ್ದರಿಂದ ಅಬ್ದುಲ್ ರೆಹಮಾನ್ ಅವರ ಮನೆಗೆ ಅಕ್ರಮವಾಗಿ ನುಗ್ಗಿ ಪಿಸ್ತೂಲ್ನಿಂದ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತರು, ಸಿಸಿಬಿಗೆ ವರ್ಗಾಯಿಸಿದ್ದರು.
ಈ ಸಂಬಂಧ ತನಿಖೆ ತೀವ್ರಗೊಳಿಸಿ, ಉದಯ್ ಗೋಪಾಲ್ ಶೆಟ್ಟಿ ಅವರನ್ನು ಬಂಧಿಸಿ, 5.76 ಸಾವಿರ ನಗದು, ಪಿಸ್ತೂಲ್, 4 ಜೀವಂತ ಗುಂಡುಗಳು, ಖಾಲಿ ಚೆಕ್ಗಳು, ಬಾಂಡ್ ಪೇಪರ್ಗಳು, ಜಮೀನಿನ ದಾಖಲಾತಿಗಳು, ಜೊತೆಗೆ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಆರೋಪಿಯು ಶ್ರೀಹರಿ ಎಂಟರ್ಪ್ರೈಸಸ್ ಎನ್ನುವ ಫೈನಾನ್ಸ್ ಹಾಗೂ ಮುನೇಶ್ವರ ಸೌಹಾರ್ದ ಸೊಸೈಟಿ ತೆರೆದು ಸಾರ್ವಜನಿಕರಿಗೆ ದುಬಾರಿ ಬಡ್ಡಿಗೆ ಸಾಲವನ್ನು ನೀಡುತ್ತಿದ್ದ. ಬಡ್ಡಿ ನೀಡದಿದ್ದರೆ, ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ.