Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ನ್ನು ನಿನ್ನೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಾರ್ಪಣೆ ಮಾಡಿದ್ದಾರೆ.
ಅಗ್ಗದ ದರದಲ್ಲಿ ಊಟ, ಉಪಾಹಾರ ನೀಡುವುದು ಈ ಕ್ಯಾಂಟೀನ್ ನ ಗುರಿ. ಇದರಿಂದ ಹಸಿವು ಮುಕ್ತ ಕರ್ನಾಟಕ ಮಾಡಬಹುದು ಮತ್ತು ಬಡವರಿಗೂ ಅಗ್ಗದ ದರದಲ್ಲಿ ಊಟ ಸಿಗುವಂತಾಗುವುದು ಎನ್ನುವುದು ಸಿಎಂ ಸಿದ್ದರಾಮಯ್ಯ ಕನಸು.
ಇದೀಗ ಈ ಕ್ಯಾಂಟೀನ್ ಮೆನುವಿನಲ್ಲಿ ಏನೇನಿರಬಹುದು ಎಂಬ ಕುತೂಹಲ ನಿಮಗಿರುತ್ತೆ ಅಲ್ವಾ? ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ವಡೆ, ದೋಸೆ, ಉಪ್ಪಿಟ್ಟು, ವಾಂಗಿ ಬಾತ್, ಚಿತ್ರಾನ್ನ, ಪುಳಿಯೋಗರೆ ಸಿಗಲಿದೆ. ಆದರೆ ಅದಕ್ಕೂ ದಿನ ನಿಗದಿಯಿದೆ. ಒಂದೊಂದು ದಿನ ಒಂದೊಂದು ತಿಂಡಿ ಸಿಗಲಿದೆ.
ಬೆಳಿಗ್ಗೆ 7.30 ರಿಂದ 9.30 ರವರೆಗೆ ಉಪಾಹಾರ ದೊರೆಯಲಿದೆ. ಇಡ್ಲಿ ಎಲ್ಲಾ ದಿನಗಳಲ್ಲೂ ಲಭ್ಯ. ಆದರೆ ಪುಳಿಯೋಗರೆ ಸೋಮವಾರ, ಖಾರಾಬಾತ್ ಮಂಗಳವಾರ, ಬುಧವಾರ ಪೊಂಗಲ್,ಗುರುವಾರ ರವಾ ಖಿಚಡಿ, ಶುಕ್ರವಾರ ಚಿತ್ರಾನ್ನ ಮತ್ತು ಶನಿವಾರಗಳಂದು ಮಾತ್ರ ವಾಂಗಿಬಾತ್ ಜತೆಗೆ ಖಾರಾಬಾತ್, ಕೇಸರೀಬಾತ್ ಸಿಗಲಿದೆ.
ಇನ್ನು ಊಟದ ಸಮಯ ಮಧ್ಯಾಹ್ನ 12.30 ರಿಂದ 2.30 ರವರೆಗೆ. ಪ್ರತೀ ದಿನ ಅನ್ನ ಸಾಂಬಾರ್, ಮೊಸರನ್ನ ಸಿಗಲಿದೆ. ಅದರ ಜತೆಗೆ ಒಂದೊಂದು ದಿನ ಟೊಮೆಟೊ ಬಾತ್, ಚಿತ್ರಾನ್ನ, ಬಿಸಿಬೇಳೆ ಬಾತ್, ಮೆಂತೆ ಪುಲಾವ್ ಮೊದಲಾದ ವೆರೈಟಿ ರೈಸ್ ಬಾತ್ ಸವಿಯಬಹುದು. ಆದರೆ ಒಬ್ಬರಿಗೆ ಒಂದು ಟೋಕನ್ ಮಾತ್ರ ಲಭ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ