Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ಏಕಾಂಗಿ ಅನಿಸಬಹುದು. ಆದರೆ ಮುಂದಿನ ದಿನಗಳಲ್ಲಿ ನನ್ನ ಜೊತೆ ಯಾರೆಲ್ಲ ಇದ್ದಾರೆ ಎಂಬುದು ತಿಳಿಯಲಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರನ್ನು ಸೋಮವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಆರ್ ಎಸ್ ಡ್ಯಾಂ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮೇಲೆ ಈಗಾಗಲೇ ಸುಮಾರು 100 ಕೋಟಿ ರೂ. ದಂಡ ವಿಧಿಸಲಾಗಿದೆ. ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯಲೇಬಾರದು. ಇದರಿಂದ ಸಾವಿರಾರು ಕೋಟಿ ರೂ.ರಾಜಧನ ನಷ್ಟವಾಗುತ್ತಿದೆ. ಕಠಿಣ ಕ್ರಮ ಕೈಗೊಂಡು ರಾಜಧನ ವಸೂಲು ಮಾಡಬೇಕಿದೆ ಎಂದರು.
ಅಕ್ರಮ ಗಣಿಗಾರಿಕೆಯಿಂದ ವಸೂಲು ಮಾಡಲಾದ ಹಣವನ್ನು
ಮಂಡ್ಯ ಅಭಿವೃದ್ಧಿ ಕೆಲಸಕ್ಕೆ ಬಳಸಬೇಕು ಅಂತ ವಿನಂತಿಸಿದ್ದೇನೆ. ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ತಗೋಬೇಕು, ಹೇಗೆ ಸರಿಪಡಿಸಬೇಕು ಅನ್ನೋದನ್ನ ಮಾತಾಡಿದ್ದೇವೆ. ನಾಳೆ ಬೇಬಿ ಬೆಟ್ಟಕ್ಕೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದು ಅವರು ಹೇಳಿದರು.
ಇಲ್ಲಿ ಜನ ಅಥವಾ ರೈತರಿಗಿಂತ ಯಾರು ದೊಡ್ಡೋರಿಲ್ಲ. ನಾನ್ಯಾವುದನ್ನ ನಾನ್ ಕ್ಲಿಯರ್ ಮಾಡಲ್ಲ. ಅಲ್ಲಿ ಏನು ಮಾಡ್ತಿದ್ದೀರಾ ಅನ್ನೋದನ್ನ ನೀವೇ ನೋಡ್ತೀರಾ? ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೋ ಇಲ್ಲವೋ ಅನ್ನೋದನ್ನು ಮಾಧ್ಯಮಗಳೇ ಸ್ಟಿಂಗ್ ಆಪರೇಷನ್ ಮಾಡಿ ಬೆಳಕಿಗೆ ತರಲಿ ಎಂದು ಮನವಿ ಮಾಡಿದರು.
ಯಾರ್ಯಾರೋ ಸವಾಲಿನ ಮಾತುಗಳಿಗೆ ಉತ್ತರಿಸೋಕೆ ಹೊಗಲ್ಲ. ಕಾಂಟ್ರವಸ್ರಿ ಮಾತಾಡೋರಿಗೆ ನಾನು ತಲೆಕೆಡಿಸಿಕೊಂಡಿಲ್ಲ. ಯಾರು ಪೊಲಿಟಿಕಲಿ ಮಾಡ್ತಿದ್ದಾರೋ ಅವರಿಗೆ ಪ್ರಶ್ನೆ ಹಾಕಿ. ನನ್ನ ಹೋರಾಟ ಒಬ್ಬಂಟಿ ಹೋರಾಟ ಅನಿಸಬಹುದು. ಬರುವ ದಿನಗಳಲ್ಲಿ ಯಾರೆಲ್ಲ ನನ್ನ ಜೊತೆ ಇದ್ದಾರೆ ಅಂತಾ ಗೊತ್ತಾಗುತ್ತೆ. ವಾಸ್ತವ ಏನು ಎಂಬುದು ಶೀಘ್ರ ಬೆಳಕಿಗೆ ಬರಲಿದೆ ಎಂದು ಅವರು ಹೇಳಿದರು.