Publish Date: Mon, 20 Sep 2021 (20:18 IST)
Updated Date: Mon, 20 Sep 2021 (20:29 IST)
ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕೆಲವೆಡೆ ಮರಗಳು ನೆಲಕ್ಕುರುಳಿವೆ. ನಗರದ ಹಲವೆಡೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಯಿತು.ಮಧ್ಯಾಹ್ನ 1.30ರ ಬಳಿಕ ಭಾರಿ ಮಳೆ ಪ್ರಾರಂಭವಾಗಿ ಸಂಜೆಯವರೆಗೆ ಸುರಿಯುವ ಸಾಧ್ಯತೆ ಇದೆ.
ಹಲವೆಡೆ ಮಳೆ:
ನಗರದ ಆರ್.ಆರ್. ನಗರ, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೆಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಪೀಠ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥನಾಗೇನಹಳ್ಳಿ, ರಾಮಮೂರ್ತಿನಗರ, ಕಾಡುಗೋಡಿ ಸೇರಿದಂತೆ ಬಹುತೇಕ ಕಡೆ ಸಾಧಾರಣ ಮಳೆಯಾಗಿರುವ ವರದಿಯಾಗಿದೆ.
ಪ್ರಮುಖ ರಸ್ತೆಗಳಲ್ಲಿ ನೀರು:
ಭಾರಿ ಮಳೆಗೆ ಮಲ್ಲೇಶ್ವರ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೇಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ನೀರು ನಿಂತಿದ್ದ ದೃಶ್ಯ ಕಂಡು ಬಂದಿದೆ