Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಎಲ್ಲ ಅಧಿಕಾರಿಗಳು ಆ ರೀತಿ ಇರುವುದಿಲ್ಲ. ಕೆಲವರು ಮಾಡುವ ಇಂತಹ ಅನ್ಯಾಯದ ಕೆಲಸಕ್ಕೆ ಇಡೀ ಸರ್ಕಾರಿ ನೌಕರ ವೃಂದದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಸಹ ಹೇಳಲಾಗುತ್ತದೆ.
ಇವರ ಮಧ್ಯೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಲಂಚಮುಕ್ತ ಕರ್ನಾಟಕ ಅಭಿಯಾನಕ್ಕೆ ಮುಂದಾಗಿದ್ದು, ಎಲ್ಲೆಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆಯೋ ಅಲ್ಲಿಗೆ ಲಗ್ಗೆ ಇಡುತ್ತಿದೆ. ಇಂಥವುದೇ ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಪಡೆದಿದ್ದ ಸರ್ಕಾರ ನೌಕರನಿಗೆ ಮಂಗಳಾರತಿ ಮಾಡಿ ಆತನಿಂದ ಲಂಚದ ಹಣವನ್ನು ವಾಪಸ್ ಕೊಡಿಸಲಾಗಿದೆ.
ಹೊಳಲ್ಕೆರೆ ತಾಲೂಕು ಕಚೇರಿ ಗುತ್ತಿಗೆ ನೌಕರ ಶಿವಣ್ಣ ಎಂಬಾತ ಜಮೀನು ಪೋಡಿ ಮಾಡಿಕೊಡುವ ಸಲುವಾಗಿ ರೂ.1000 ಲಂಚವನ್ನು ವರ್ಷದ ಹಿಂದೆ ಪಡೆದಿದ್ದ. ಈ ವಿಷಯ ತಿಳಿದ ಕೆಆರ್ಎಸ್ ಕಾರ್ಯಕರ್ತರು ಆತನನ್ನು ಪ್ರಶ್ನಿಸಿದಾಗ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಲ್ಲದೆ ಫೋನ್ ಪೇ ಮೂಲಕ ವಾಪಸ್ ನೀಡಿದ್ದಾನೆ. ಇದರ ವಿಡಿಯೋವನ್ನು ಈಗ ಕೆಆರ್ಎಸ್ ಕಾರ್ಯಕರ್ತರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.