Publish Date: Sun, 16 Oct 2022 (15:13 IST)
Updated Date: Sun, 16 Oct 2022 (15:15 IST)
ಭುವನೇಶ್ವರ : ಶಾಲಾ ಪ್ರಾರ್ಥನೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ನಡೆದಿದೆ.
ಧಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ಸಾರ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಬೆಳಗಿನ ಪ್ರಾರ್ಥನೆ ವೇಳೆ ಆಕೆ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞಾಹೀನಳಾಗಿದ್ದಳು ಎಂದು ಆಕೆಯ ಸಹಪಾಠಿಗಳು ಹೇಳಿದ್ದಾರೆ.
ಬಾಲಕಿಯನ್ನು ತಕ್ಷಣ ತರಗತಿಯೊಳಗೆ ಕರೆದೊಯ್ದು ಆಕೆಯನ್ನು ಎಚ್ಚರಗೊಳಿಸಲು ಶಿಕ್ಷಕರು ಸಾಕಷ್ಟು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಹಾಗಾಗಿ ಮೊದಲಿಗೆ ಆಕೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು, ಬಳಿಕ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ಶಿಕ್ಷಕರೊಬ್ಬರು ತಿಳಿಸಿದ್ದಾರೆ.