Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯದ ಜನರಿಗೆ ಕೆ.ಎಸ್.ಐ.ಸಿ ಗೌರಿ ಗಣೇಶ ಹಬ್ಬದ ಕೊಡುಗೆ ನೀಡಲು ಸಜ್ಜಾಗಿದೆ. ರಿಯಾಯತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ಮಾರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ.
ರೇಷ್ಮೆ ಸಚಿವ ಸಾ.ರಾ. ಮಹೇಶ್ ಯೋಜನೆ ರೂಪಿಸಿದ್ದು, ಮಧ್ಯಮ ವರ್ಗದವರಿಗೂ ಮೈಸೂರು ರೇಷ್ಮೆ ಸೀರೆ ತಲುಪಿಸುವ ಉದ್ದೇಶದಿಂದ ಮಾರಾಟ ಮಾಡಲಾಗುತ್ತಿದೆ. ಕೆ.ಎಸ್.ಐ.ಸಿ ಯಿಂದ ಗೌರಿ ಗಣೇಶ ಹಬ್ಬದ ಕೊಡುಗೆ ಅಂಗವಾಗಿ 4,500 ರೂಪಾಯಿಗೆ ಮೈಸೂರು ರೇಷ್ಮೆ ಸೀರೆ ಲಭ್ಯವಾಗಲಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾರಾಟಕ್ಕೆ ಚಾಲನೆ ನೀಡಿದರು.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕೆ.ಎಸ್.ಐ.ಸಿ ಮಾರಾಟ ಮಳಿಗೆಯಲ್ಲಿ ಚಾಲನೆ ನೀಡಿದರು.
ಬೆಳಿಗ್ಗೆ 10 ರಿಂದ 3 ಗಂಟೆವರೆಗೆ ಅಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ಒಂದು ಸೀರೆ ಮಾತ್ರ ಮಾರಾಟ ಮಾಡಲಾಗುತ್ತದೆ.
3 ಗಂಟೆ ನಂತರ ಲಾಟರಿ ಮೂಲಕ ಆಯ್ಕೆ ಮಾಡಿ ಸೀರೆ ಮಾರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಮೈಸೂರು, ರಾಮನಗರ, ಬೆಳಗಾವಿ, ದಾವಣಗೆರೆ, ಬೆಂಗಳೂರಿನ ಮಾರಾಟ ಮಳಿಗೆಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ.
ಸ್ಪನ್ ಸಿಲ್ಕ್ ಮಿಲ್ಸ್ ಆವರಣ ಮಂಗಳವಾರ ಪೇಟೆ ಚನ್ನಪಟ್ಟಣ, ಮೈಸೂರು ಮೃಗಾಲಯದ ಮಾರಾಟ ಮಳಿಗೆ ಮೈಸೂರು, ಕನ್ನಡ ಸಾಹಿತ್ಯ ಭವನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಬೆಳಗಾವಿ, ರೋಟರಿ ಬಾಲಭವನ ದಾವಣಗೆರೆ, ಎಫ್.ಕೆ.ಸಿ.ಸಿ.ಐ ಕಟ್ಟಡದ ಆವರಣ ಕೆಂಪೇಗೌಡ ರಸ್ತೆ ಬೆಂಗಳೂರು ಸೇರಿದಂತೆ ಒಟ್ಟು ರಾಜ್ಯದ 5 ಕಡೆ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ ಎಂದು ಸಚಿವ ಸಾ.ರಾ ಮಹೇಶ್ ಮಾಹಿತಿ ನೀಡಿದ್ದಾರೆ.