Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುವ ಸಂದರ್ಭದಲ್ಲಿ ಸಿಲಿಂಡರ್ ಸೋಟಗೊಂಡ ಪರಿಣಾಮ ಮೂವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇಟ್ಟುಮಡುವಿನ ಮಂಜುನಾಥನಗರದ ಕಿಶೋರ್ ಎಂಬುವವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಇಂದು ಮುಂಜಾನೆ 2.20ರಲ್ಲಿ ಕಿಶೋರ್ ಅವರ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಅಕ್ಕಪಕ್ಕದವರು ಗಮನಿಸಿ ಕೂಗಿಕೊಂಡಿದ್ದಾರೆ. ಕೂಗಾಟ-ಚೀರಾಟ ಕೇಳಿ ಎಚ್ಚರಗೊಂಡ ಎರಡನೆ ಮಹಡಿಯಲ್ಲಿ ವಾಸವಾಗಿದ್ದ ಕಿಶೋರ್ ಅವರು ಬಾಗಿಲು ತೆರೆದು ಹೊರಗೆ ಬರುತ್ತಿದ್ದಂತೆ ಬೆಂಕಿಯ ಬಿಸಿ ಮುಖಕ್ಕೆ ಬಡಿದಂತಾಗಿದೆ.
ತಕ್ಷಣ ಕಿಶೋರ್ ಅವರು ಪತ್ನಿ ಹಾಗೂ ಮಗುವಿನೊಂದಿಗೆ ಮನೆಯಿಂದ ಹೊರಗೆ ಬಂದು ಟೆರೆಸ್ ಗೇಟ್ ಒಡೆದು ಪಕ್ಕದ ಮನೆಯ ಕಟ್ಟಡಕ್ಕೆ ಹೋಗಿ ಪಾರಾಗಿದ್ದಾರೆ. ನಂತರ ನೆರೆಹೊರೆಯವರೊಂದಿಗೆ ಸೇರಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟೊತ್ತಿಗಾಗಲೇ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕೆ ದೌಡಾಯಿಸಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುತ್ತಿದ್ದಾಗ ಏಕಾಏಕಿ ಮಹಡಿಯ ಮೆಟ್ಟಿಲು ಕೆಳಗೆ ಅಳವಡಿಸಿದ್ದ ಸಿಲಿಂಡರ್ಗೆ ಬೆಂಕಿ ತಾಗಿ ಸೋಟಗೊಂಡಿದೆ.
ನೋಡನೋಡುತ್ತಿದ್ದಂತೆ ಸೋಟಗೊಂಡಿದ್ದರಿಂದ ಮೂವರು ಅಗ್ನಿಶಾಮಕ ಸಿಬ್ಬಂದಿಗಳಾದ ಹರೀಶ್, ಹೆಗಡೆ ಮತ್ತು ಮುತ್ತಪ್ಪ ಎಂಬುವವರು ಗಾಯಗೊಂಡಿದ್ದು, ತಕ್ಷಣ ಅವರನ್ನು ಅಪೊಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.