Publish Date: Sunday, 21 November 2021 (17:56 IST)
Updated Date: Sunday, 21 November 2021 (17:59 IST)
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತಕ್ಕೆ ಕಳೆದ ಎರಡು ವಾರಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಸುರಿದ ಭಾರೀ ಮಳೆಗೆ ಜನರ ಬದುಕು ಅಕ್ಷರಶಃ ನಲುಗಿಹೋಗಿದೆ.ಸಾವಿರಾರು ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಮಳೆಹಾನಿ ಪೀಡಿತ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಮಲೆನಾಡು ಭಾಗದಲ್ಲಿ ಅಡಿಕೆ, ಕಾಫಿ, ಮೆಣಸು ಬೆಳೆ ಸಂಪೂರ್ಣ ಹಾಳಾಗಿದ್ದರೆ, ಬಯಲುಸೀಮೆಯ ಶೇಂಗಾ, ಈರುಳ್ಳಿ, ಉತ್ತರ ಕರ್ನಾಟಕ ಭಾಗದ ಮೆಕ್ಕೆ ಜೋಳ, ತೊಗರಿ, ಜೋಳ ಬೆಳೆ ನೀರಿನಲ್ಲಿ ಕೊಚ್ಚಿಹೋಗಿವೆ.
ಭತ್ತ, ರಾಗಿ ಸೇರಿದಂತೆ ಬಹುತೇಕ ಬೆಳೆ ಭಾರೀ ಮಳೆಯ ನೀರಿಗೆ ಆಹುತಿಯಾಗಿದ್ದು, ರೈತ ಸಮುದಾಯ ತಲೆ ಮೇಲೆ ಕೈಹೊತ್ತು ಕುಳಿತಿದೆ. ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿದ್ದ ರೈತರ ಕನಸು ಸಂಪೂರ್ಣ ಭಗ್ನವಾಗಿದೆ. ಮೆಕ್ಕೆಜೋಳ, ಶುಂಠಿ, ಹತ್ತಿ, ಮೆಣಸಿನ ಕಾಯಿ, ತರಕಾರಿ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು ಒಂದು ಲಕ್ಷ ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದ್ದು, ಬೆಳೆ ಸಂಪೂರ್ಣ ಮುಳುಗಿ ಹೋಗಿದೆ.