Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಶೋಕ ನಗರ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್(ಎಎಸ್ ಐ) ಒಬ್ಬರು, ಟೈಲರ್ ಸೇರಿದಂತೆ ಇಬ್ಬರು ವಂಚಕರನ್ನು ಬಂಧಿಸುವುದರೊಂದಿಗೆ ನಗರದಲ್ಲಿನ ನಕಲಿ ಇಂಜಿನ್ ಆಯಿಲ್ ದಂಧೆಯನ್ನು ಬೇಧಿಸಿದ್ದಾರೆ. ಪ್ರಮುಖ ಆರೋಪಿ ಚೆನ್ನಪಟ್ಟಣದ ಸ್ವಾಮಿ ಹಾಗೂ ಹಾಸನ ಜಿಲ್ಲೆಯ ಎಂ. ಆರ್.ನಾಗರಾಜ್ ನಿಂದ ಸುಮಾರು 10 ಲಕ್ಷ ರೂ. ಮೌಲ್ಯದ ನಕಲಿ ಎಂಜಿನಿ ಆಯಿಲ್ ವಶಕ್ಕೆ ಪಡೆಯಲಾಗಿದೆ.
ಮೆಕಾನಿಕ್ ಒಬ್ಬರಿಂದ ನಕಲಿ ಇಂಜಿನ್ ಆಯಿಲ್ ದಂಧೆ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿ, ಸ್ಥಳೀಯ ಗುಪ್ತಚರರನ್ನು ಬಳಸಿಕೊಂಡು ಮೊದಲಿಗೆ ನಾಗರಾಜ್ ನನ್ನು ಬಂಧಿಸಲಾಗಿದೆ. ನಂತರ ಚೆನ್ನಪಟ್ಟಣ ತಾಲೂಕಿನ ಯಲಚಿನಪಾಳ್ಯದಲ್ಲಿ ಸ್ವಾಮಿಯನ್ನು ಬಂಧಿಸಿ, ಆಯಿಲ್ ತಯಾರಿಕಾ ಘಟಕಕ್ಕೆ ಬೀಗ ಜಡಿದಿದ್ದಾರೆ.
ಈ ಆಯಿಲ್ ದಂಧೆ ಜಾಲದ ಬಗ್ಗೆ ಬೆನ್ನತ್ತಿದ್ದ ಪೊಲೀಸ್ ಅಧಿಕಾರಿ, ಆರೋಪಿಗಳಿಗೆ ಕಚ್ಚಾ ಆಯಿಲ್ ಪೂರೈಸುತ್ತಿದ್ದವರ ಬಗ್ಗೆ ಮಾಹಿತಿ ಪಡೆಯಲು ಒಂದು ವಾರ ದೆಹಲಿಯಲ್ಲಿ ಬೀಡುಬಿಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳು, ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಗೆ ರೂ. 100 ರಿಂದ 150 ರಂತೆ ನಕಲಿ ಇಂಜಿನ್ ಆಯಿಲ್ ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.