Publish Date: Tue, 06 Sep 2022 (16:45 IST)
Updated Date: Tue, 06 Sep 2022 (17:51 IST)
ರಾಮನಗರದ ಬಳಿಯಲ್ಲಿ ಕೆ ಎಸ್ ಆರ್ ಟಿಸಿ ಬಸ್ ಅಂಡರ್ ಪಾಸ್ ನಲ್ಲಿ ಮುಳುಗಿದ ಸುದ್ದಿ ನೋಡಿರುತ್ತೀರಿ. ನೀವು ಓದಿರುತ್ತೀರಿ. ಈ ವೇಳೆ ತುರ್ತು ನಿರ್ಗಮದ ಭಾಗಿಲಿನ ಮೂಲಕ ರಕ್ಷಿಸಿದವರು ಆ ಬಸ್ ಚಾಲಕ ಹಾಗೂ ನಿರ್ವಾಹಕರು.
ಮಹಾ ಮಳೆಗೆ ಊರಿಗೆ ಊರೇ ನೀರಿನಲ್ಲಿ ಮುಳುಗುತ್ತಿದ್ದು, ಹೆದ್ದಾರಿಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತ, ಈ ರಕ್ಕಸ ಮಳೆಯಲ್ಲಿ ಸಾರಿಗೆ ಬಸ್ಸುಗಳನ್ನು ಚಾಲನೆ ಮಾಡುವ ದೊಡ್ಡ ಸವಾಲು ಕೆ ಎಸ್ ಆರ್ ಟಿ ಸಿಯ ಚಾಲನಾ ಸಿಬ್ಬಂದಿಗಳದ್ದಾಗಿದೆ.
ಈ ನಡುವೆಯೂ ದಿನಾಂಕ: 29.08.2022 ರಂದು ರಾಮನಗರ ಮೈಸೂರು - ಬೆಂಗಳೂರು ಹೆದ್ದಾರಿ ಅಕ್ಷರಶಃ ನೀರಿನಿಂದ ಮುಳುಗಿತ್ತು. ವಾಹನ ಸಂಖ್ಯೆ ಕೆಎ42-ಎಫ್0502 ಅನುಸೂಚಿ ಸಂಖ್ಯೆ-117 (ಉರಗಹಳ್ಳಿ - ರಾಮನಗರ) ಮಾರ್ಗದಲ್ಲಿ ಚಾಲನೆಯಲ್ಲಿದ್ದಾಗ, ರಾಮನಗರ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ನಲ್ಲಿ ಬರುತ್ತಿದ್ದ ಬಸ್ಸು ಮಳೆ ನೀರಿಗೆ ಸಿಲುಕಿ ಮುಳುಗಡೆಯಾಗಿತ್ತು. ಸ್ವಲ್ಪ ಮುಂದೆ ಇದೇ ಮಾರ್ಗದಲ್ಲಿ ಮತ್ತೊಂದು ಖಾಸಗಿ ವಾಹನ ಕೆಟ್ಟು ನಿಂತಿದ್ದರಿಂದ ಬಸ್ಸನ್ನು ಮುಂದೆ ಚಲಾಯಿಸಲು ಸಾಧ್ಯವಾಗಲೇ ಇಲ್ಲ.
ಈ ಸಂದರ್ಭದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಗ್ಗೆ ಚಿಂತೆಗೊಳಗಾದಂತ ರಾಮನಗರ ಡಿಪೋ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಕಂ ನಿರ್ವಾಹಕರಾದಂತ ಲಿಂಗರಾಜು ಹಾಗೂ ವೆಂಕಟೇಶ್ ಬ್ರಿಡ್ಜ್ ಸಮೀಪದಲ್ಲಿ ಹುಡುಕಾಡಿ ಏಣಿಯನ್ನು ತಂದಿದ್ದಾರೆ. ಆ ಏಣಿಯನ್ನು ತುರ್ತು ನಿರ್ಗಮನದ ಬಾಗಿಲಿನ ಬಳಿಗೆಹಾಕಿ ಬಸ್ಸಿನಲ್ಲಿದ್ದಂತ ಪ್ರಯಾಣಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಇಳಿಸಿದ್ದಾರೆ.
ಎಸ್ ಆರ್ ಟಿ ಸಿ ಬಸ್ಸಿನಲ್ಲಿದ್ದಂತ ಪ್ರಯಾಣಿಕರನ್ನು ಎದೆ ಮಟ್ಟದ ನೀರಿನಲ್ಲಿ ನಿಂತು ಸುರಕ್ಷಿತವಾಗಿ ಇಳಿಸಿದಂತ ಚಾಲಕ ಕಂ ನಿರ್ವಾಹಕ ಲಿಂಗರಾಜು ಹಾಗೂ ವೆಂಕಟೇಶ್ ಕ್ಷಣ ಕ್ಷಣಕ್ಕೂ ಬ್ರಿಡ್ಜ್ ಕೆಳಗೆ ನೀರು ಏರಿಕೆಯಾಗುತ್ತಿದ್ದರೂ ಎದೆಗುಂದಿಲ್ಲ. ಎಲ್ಲಾ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ, ಸುರಕ್ಷಿತ ಸ್ಥಳಕ್ಕೆ ತಲುಪಿದ ನಂತ್ರ, ಸ್ಥಳೀಯರ ನೆರವಿನಿಂದ ನೀರಿನಿಂದ ಹೊರ ಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.