Publish Date: Tue, 25 Sep 2018 (20:13 IST)
Updated Date: Tue, 25 Sep 2018 (20:15 IST)
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನೆಯಿಂದ ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ಏರ್ಪಡಿಸಲಾಗಿದ್ದ ಪೋಷಣ ಮಾಸ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗರ್ಭಿಣಿ ಆರೋಗ್ಯವಾಗಿದ್ದರೆ ಹುಟ್ಟುವ ಮಗು ಸದೃಢವಾಗಿರುತ್ತದೆ. ಕಾರಣ ಗರ್ಭಿಣಿಯರು ಸಮರ್ಪಕವಾಗಿ ಪೌಷ್ಠಿಕ ಆಹಾರವನ್ನು ಸ್ವೀಕರಿಸಬೇಕು. ಗರ್ಭಿಣಿಯರನ್ನು ಹಾಗೂ ಹುಟ್ಟುವ ಮಗುವನ್ನು ಆರೋಗ್ಯವಂತರನ್ನಾಗಿಸುವುದೇ ಪೋಷಣ ಮಾಸ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದರು.
ಗರ್ಭಿಣಿಯರು ಹಾಗೂ ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಆಗಮಿಸಿ ಮಾತೃಪೂರ್ಣ ಯೋಜನೆಯಡಿ ಪೌಷ್ಠಿಕ ಆಹಾರ ಸೇವಿಸಬೇಕು. ಜೊತೆಗೆ ತಮ್ಮ ಆರೈಕೆಯ ಬಗ್ಗೆ ಮಾಹಿತಿ ಪಡೆಯಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಭಾವನಾತ್ಮಕವಾಗಿ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ತೊಂದರೆಗಳು ನಿವಾರಣೆಯಾಗುವವು. ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ, ಚುಚ್ಚುಮದ್ದು ಹಾಗೂ ಇತರೆ ಸೌಲಭ್ಯಗಳು ದೊರೆಯುವವು ಎಂದರು.
ಇದೇ ಸಂದರ್ಭದಲ್ಲಿ ಪೋಷಣ ಮಾಸ ಕಾರ್ಯಕ್ರಮದ ಅಂಗವಾಗಿ ಸೆಂಟ್ ಜಾನ್ ನಗರ ಕುಟುಂಬ ಕಲ್ಯಾಣ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅನ್ನ ಪ್ರಾಶನ್ ಹಾಗೂ ಮಕ್ಕಳಿಂದ ಅಕ್ಷರ ಅಭ್ಯಾಸ ಕಾರ್ಯಕ್ರಮ, ತಾಯಂದಿರಿಗೆ ಪೌಷ್ಠಿಕ ಆಹಾರ ಶಿಬಿರ ಹಾಗೂ ಬಾಲ ಸಮಿತಿ ಕಾರ್ಯಕ್ರಮವನ್ನು ಜರುಗಿಸಲಾಯಿತು.