Publish Date: Mon, 29 Oct 2018 (18:13 IST)
Updated Date: Mon, 29 Oct 2018 (18:15 IST)
ನವೆಂಬರ್ 1ರಂದು ಕರಾಳ ದಿನ ಆಚರಣೆ ಮಾಡುವವರನ್ನ ಸರ್ಕಾರ ಗಡಿಪಾರು ಮಾಡಬೇಕು ಅಂತಾ ಕನ್ನಡಪರ ಹೋರಾಟಗಾರ ಆಗ್ರಹ ಮಾಡಿದ್ದಾರೆ.
ನವೆಂಬರ್ 1ರಂದು ಕರಾಳ ದಿನ ಆಚರಣೆ ಮಾಡುವವರನ್ನ ಸರ್ಕಾರ ಗಡಿಪಾರು ಮಾಡಬೇಕು ಅಂತಾ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ, ಪ್ರತಿಬಾರಿ ಕನ್ನಡ ರಾಜ್ಯೋತ್ಸವದಂದು ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸುವ ಮೂಲಕ ಪುಂಡಾಟ ನಡೆಸುತ್ತಿದೆ. ಈ ಬಾರಿ ಸರ್ಕಾರವೇ ಕನ್ನಡ ಪರ ಸಂಘಟನೆಗಳನ್ನ ಒಂದುಗೂಡಿಸಿಕೊಂಡು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಬೇಕು ಅಂತಾ ಮನವಿ ಮಾಡಿದ್ದಾರೆ. ಇನ್ನು ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಬಗ್ಗೆ ಯಾವುದೇ ಸರ್ಕಾರಕ್ಕೂ ಕಾಳಜಿ ಇಲ್ಲವಾಗಿದ್ದು ಗಡಿ ಜಿಲ್ಲೆಗಳ ಅಭಿವೃದ್ಧಿ ಮಾಡುವತ್ತ ಸರ್ಕಾರ ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನ ಉತ್ತರಕರ್ನಾಟಕಕ್ಕೆ ಮೀಸಲಿಡಬೇಕು ಅಂತಾ ವಾಟಾಳ್ ಒತ್ತಾಯಿಸಿದ್ದಾರೆ.
ಇನ್ನು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಳಗಾವಿ ಸುವರ್ಣ ಸೌಧ ಕೇವಲ ವರ್ಷಕ್ಕೊಮ್ಮೆ ಮಾತ್ರ ಬಳಕೆಯಾಗುತ್ತಿದ್ದು ವರ್ಷದ 11 ತಿಂಗಳು ಕೋಮಾ ಸ್ಥಿತಿಯಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅದರ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಅಂತಾ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಹೊರರಾಜ್ಯದವರ ಸಂಖ್ಯೆ ಹೆಚ್ಚಾಗಿದ್ದು ಕನ್ನಡಿಗರಿಗೆ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಒದಗಿಸುವಲ್ಲಿ ಪ್ರಯತ್ನಿಸಬೇಕು ಎಂದರು. ಇನ್ನು ಗಡಿ ಜಿಲ್ಲೆ ಕಾರವಾರದ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಇದೇ ಅಕ್ಟೋಬರ್ 24ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಅಂತಾ ತಿಳಿಸಿದ್ದಾರೆ.