Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಿವಮೊಗ್ಗ : ಕಾಂಗ್ರೆಸ್ ರೌಡಿಗಳ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದವರು ಎಂದು ಕಾಂಗ್ರೆಸ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.
ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಲೇವಡಿ ಮಾಡಿತ್ತು. ಬಿಜೆಪಿ ರೌಡಿಗಳ ಪಕ್ಷ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿತ್ತು.
ಇದಕ್ಕೆ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ನಮ್ಮದು ರೌಡಿಗಳ ಪಕ್ಷ ಅಲ್ಲ. ಸುಸಂಸ್ಕೃತರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಹಾರ್ ಜೈಲಿನಲ್ಲಿ ಇದ್ದು ಬಂದವರು. ಕಾಂಗ್ರೆಸ್ನ ಯುವ ಮೋರ್ಚಾ ಅಧ್ಯಕ್ಷ ನಲಪಾಡ್ ಬಾರ್ನಲ್ಲಿ ಹೊಡೆದಾಡಿ ಜೈಲಿಗೆ ಹೋಗಿ ಬಂದವನು ಎಂದು ಕಾಂಗ್ರೆಸ್ಗೆ ಠಕ್ಕರ್ ಕೊಟ್ಟರು.
ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾತನಾಡಿ, ಕರ್ನಾಟಕದ ಒಂದಿಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ರಾಜ್ಯದ ಆರೂವರೆ ಕೋಟಿ ಜನ ಒಗ್ಗಟ್ಟಾಗಿದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ. ಗಡಿಭಾಗದ ಜನ ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ತಿಳಿಸಿದರು.