Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಾದಕ ವಸ್ತು ಗಾಂಜಾ ಪೊಟ್ಟಣಗಳನ್ನು ಬೈಕ್ನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಯಾಸಿರ್(33), ರಾಜಗೋಪಾಲನಗರದ ಬೈರೇಶ್(23) ಬಂಧಿತರು. ಬಂಧಿತರಿಂದ 1 ಕೆಜಿ 200 ಗ್ರಾಂ ಗಾಂಜಾ, 700 ನಗದು, 8.55 ಲಕ್ಷ ರೂ. ಬೆಲೆ ಬಾಳುವ 8 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.3ರಂದು ಇಬ್ಬರು ಬೈಕ್ನಲ್ಲಿ ಗಾಂಜಾ ಪೊಟ್ಟಣಗಳನ್ನಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಪೊಲೀಸರಿಗೆ ಲಭಿಸಿದೆ. ಇನ್ಸ್ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಾದಕ ವಸ್ತುವನ್ನು ಆಂಧ್ರದಿಂದ ತರಿಸಿಕೊಂಡು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳು ಕೆಂಗೇರಿ, ಜ್ಞಾನಭಾರತ, ಎಚ್ಎಎಲ್, ಬಾಗಲಗುಂಟೆ, ಮಾದನಾಯಕನಹಳ್ಳಿ, ಬಿಡದಿ ಹಾಗೂ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮನೆಗಳ ಮುಂದೆ, ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು 8 ದ್ವಿಚಕ್ರ ವಾಹನಗಳನ್ನು ಹಾಗೂ ಮಾದಕವಸ್ತು ಗಾಂಜಾ, ಹಣ ವಶಪಡಿಸಿಕೊಂಡಿದ್ದಾರೆ.