Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಈ ವರ್ಷ ಮಳೆರಾಯ ಮಲೆನಾಡಿಗರನ್ನು ಬೆಂಬಿಡದೆ ಕಾಡತೊಡಗಿದ್ದಾನೆ. ವರುಣನ ಆರ್ಭಟಕ್ಕೆ ಮತ್ತೆ ಮತ್ತೆ ಅವಘಡಗಳು ಮರುಕಳಿಸುತ್ತಿವೆ.
ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಸುರಿದ ಮಹಾಮಳೆಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನೇನು ಮಳೆ ಕಡಿಮೆಯಾಯಿತು, ಜೀವನ ಸರಿ ಹೋಗುತ್ತದೆ ಎನ್ನುವಷ್ಟರಲ್ಲಿ ಅವಘಡಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ.
ಮಳೆ ನಿಂತರೂ ಸಕಲೇಶಪುರ ತಾಲ್ಲೂಕಿನಲ್ಲಿ ಗುಡ್ಡ ಕುಸಿತ ನಿಲ್ಲದಾಗಿದೆ. ಮತ್ತೆ ರೈಲು ಹಳಿಯ ಮೇಲೆ ಗುಡ್ಡ ಕುಸಿತವಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡಕುಮರಿಯ 72ನೇ ಮೈಲಿ ಬಳಿ ಮತ್ತೆ ಗುಡ್ಡ ಕುಸಿತವಾಗಿದೆ. ಕಳೆದ ಕೆಲ ದಿನಗಳಿಂದ ಗುಡ್ಡ ಕುಸಿದು ರೈಲು ಸಂಚಾರ ಬಂದ್ ಆಗಿತ್ತು. ಇನ್ನೇನು ತೆರವು ಕಾರ್ಯ ಪೂರ್ಣವಾಗಿ ರೈಲು ಸಂಚಾರ ಮತ್ತೆ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಗುಡ್ಡ ಕುಸಿದಿರುವುದರಿಂದ ರೈಲು ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಯಡಕುಮರಿಯಲ್ಲಿ ಪದೇ ಪದೆ ಗುಡ್ಡ ಕುಸಿಯುತ್ತಿದ್ದು, ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿದ್ದಾರೆ.