Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಆನೇಕಲ್ : ಸ್ವಂತಂತ್ರ ಪೂರ್ವ ಹಾಗೂ ನಂತರದಲ್ಲೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯಾಗಬೇಕೆಂದು ಕಾಂಗ್ರೆಸ್ನ ಉದ್ದೇಶವಾಗಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟದಲ್ಲಿ ಕರ್ನಾಟಕ ಭೋವಿ ಸಂಘರ್ಷ ಸಮಿತಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ. ಅಂಬೇಡ್ಕರ್ ಹಾಗೂ ಸಮಾಜದ ಮಂಜರಿ ಹನುಮಂತಪ್ಪ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಭಾರತದ ಪವಿತ್ರ ನೆಲದಲ್ಲಿ 9 ಶತಮಾನಗಳಿಂದಲೂ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಜಾತಿ ವ್ಯವಸ್ಥೆ ಬದಲಾಗದೇ ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲ ಹೊಂದಲು ಸಾಧ್ಯವಾಗಲಿಲ್ಲ.
ಚಿಂತನಶೀಲತೆ, ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳದ ಕಾರಣ ಜಡತ್ವ ತುಂಬಿ ಚಲನಶೀಲತೆ ಇಲ್ಲವಾಗಿದೆ. ಆಲೋಚನೆ, ಅವಕಾಶ ನಿಂತ ನೀರಾಗದೇ ಹರಿವ ಝರಿಯಾಗಬೇಕು. ಸಮ ಸಮಾಜದಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.