Publish Date: Wed, 07 Sep 2022 (17:06 IST)
Updated Date: Wed, 07 Sep 2022 (17:20 IST)
ಅಕ್ರಮ ಚಟುವಟಿಕೆ ತಾಣ ಎಂದು ಹೆಸರು ಪಡೆದಿದ್ದ ಪರಪ್ಪನ ಅಗ್ರಹಾರ ಜೈಲು ಇದೀಗ ದೇಶದ ಎಲ್ಲಾ ಜೈಲುಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ. ದೇಶದಲ್ಲಿರುವ ಒಟ್ಟು 1319 ಜೈಲುಗಳಿಗೆ ಹೋಲಿಸಿದರೆ ಬೆಂಗಳೂರಿನ ಸೆಂಟ್ರಲ್ ಜೈಲು ಅತಿ ಹೆಚ್ಚು ಶುಚಿತ್ವ ಹೊಂದಿರುವ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಗೃಹ ಸಚಿವಾಲಯವೇ ಅತಿ ಶುಚಿತ್ವದ ಜೈಲು ಎಂದು ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದೆ.
ಜೈಲು ಸಿಬ್ಬಂದಿಯೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಈ ಹಿಂದೆ ಕೇಳಿಬಂದಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿ ಎತ್ತಂಗಡಿ ಮಾಡಿಸಿತ್ತು. ಅಕ್ರಮ ತಡೆಗಟ್ಟಲು ಜೈಲು ಪ್ರವೇಶದ್ವಾರದ ಬಳಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿತ್ತು. ಅಲ್ಲದೆ ಜೈಲಿನ ಅವ್ಯವಸ್ಥೆಗಳ ಬಗ್ಗೆ ಸಜಾಬಂಧಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಜೈಲಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ಫಲವಾಗಿ ಪರಪ್ಪನ ಅಗ್ರಹಾರ ಜೈಲು ದೇಶದ ಇತರೆ ಜೈಲುಗಳಿಗಿಂತ ಮೊದಲ ಸ್ಥಾನ ಪಡೆದಿದೆ. ಆಂಧ್ರಪ್ರದೇಶ ವಿಶಾಖಪಟ್ಟಣ ಹಾಗೂ ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಕ್ಕೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದೆ.