Publish Date: Wed, 07 Sep 2022 (16:19 IST)
Updated Date: Wed, 07 Sep 2022 (17:36 IST)
ಬೆಂಗಳೂರು ಮಹಾನಗರದ ನಿವಾಸಿಗಳ ಸಮಸ್ಯೆ ನಿವಾರಣೆಗೆ ವಾರ್ಡ್ವಾರು ಕುಂದುಕೊರತೆ ಕೋಶವನ್ನು ತಕ್ಷಣವೇ ಸ್ಥಾಪಿಸಿ' ಎಂದು ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು' ಎಂದು ಕೋರಿ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಐಟಿ ಕಾರಿಡಾರ್ ನ ಹಲವು ಭಾಗಗಳು ಸೇರಿದಂತೆ
ಆಗ್ನೇಯ ಬೆಂಗಳೂರಿನ ವಿವಿಧೆಡೆ ಆಗಸ್ಟ್ 30 ರಿಂದ ಪದೇ ಪದೇ ಸುರಿಯುತ್ತಿರುವ ಮಳೆ ಮತ್ತು ಇದರಿಂದಾಗಿ ರಸ್ತೆಗಳ ದುಃಸ್ಥಿತಿ ಬಗ್ಗೆ ನ್ಯಾಯಪೀಠದ ಗಮನ ಸೆಳೆದರು. ಚರಂಡಿಗಳಿಂದ ತುಂಬಿ ಹರಿಯುತ್ತಿರುವ ನೀರಿನ ಸಮಸ್ಯೆಯನ್ನು ವಿವರಿಸಿದರು.
ಈ ಆಕ್ಷೇಪಣೆಗೆ ಬಿಬಿಎಂಪಿ ಪರ ವಕೀಲರು, "ನೀರು ನಿಂತಿರುವ ಭಾಗಗಳಲ್ಲಿ ಈಗಾಗಲೇ ಪಂಪ್ ಸೆಟ್ಗಳನ್ನು ಅಳವಡಿಸಿ ನೀರು ಖಾಲಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು 24x7 ಕೆಲಸ ಮಾಡುತ್ತಿದ್ದಾರೆ. ನೆರೆಪೀಡಿತ ಪ್ರದೇಶಗಳಿಂದ ನೀರು ಹರಿಸಲು ವಲಯವಾರು ಮಟ್ಟದಲ್ಲಿ ನಿರಂತರ ಕ್ರಮ ಕೈಗೊಳ್ಳಲಾಗಿದೆ" ಎಂದು ಸಮಜಾಯಿಷಿ ನೀಡಿದರು.