Publish Date: Mon, 11 Dec 2023 (18:21 IST)
Updated Date: Mon, 11 Dec 2023 (18:27 IST)
ಸಚಿವ ಜಮೀರ್ ಅಹ್ಮದ್ ಖಾನ್ ವಿವಾದದ ಹೇಳಿಕೆ ಸದನದಲ್ಲಿ ಕೋಲಾಹಲ ಎಬ್ಬಿಸಿದೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜಮೀರ್ ವಿವಾದದ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ. ಜಮೀರ್ ಅವರು ಪ್ರಶ್ನೆಗೆ ಉತ್ತರಿಸಲು ಮುಂದಾದಾಗ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯಪ್ರವೇಶ ಮಾಡಿ, ಜಮೀರ್ ಅಹಮ್ಮದ್ ಖಾನ್ ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ.
ಹಿಂದೂ, ಮುಸ್ಲಿಂ ಭಾವನೆ ಕೆದಕಿದ್ದಾರೆ, ಅವರಿಗೆ ಮಾತನಾಡಲು ಅವಕಾಶ ಕೊಡಲ್ಲ ಎಂದು ಹೇಳಿದ್ರು.. ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ವಜಾ ಮಾಡುವಂತೆ ಆರ್.ಅಶೋಕ್ ಆಗ್ರಹಿಸಿದ್ರು. ನಾವೇನು ಗುಲಾಮರಾ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದು, ಈ ವೇಳೆ ಅಶೋಕ್ ಮಾತಿಗೆ ಬಿಜೆಪಿ ಇತರ ಸದಸ್ಯರು ಧ್ವನಿಗೂಡಿಸಿದ್ರು. ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಸೇರಿದಂತೆ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದ್ರು.
ನೋಟಿಸ್ ಕೊಟ್ಟು ಮಾತನಾಡಲಿ, ಪ್ರಶ್ನೋತ್ತರ ಅವಧಿಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ರು. ಬಳಿಕ ಸ್ಪೀಕರ್ U.T.ಖಾದರ್ ಹತ್ತು ನಿಮಿಷಗಳ ಕಾಲ ಸದನ ಮುಂದೂಡಿದ್ರು.