Publish Date: Fri, 03 Feb 2023 (20:19 IST)
Updated Date: Fri, 03 Feb 2023 (20:23 IST)
ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್..ಕೈ ತುಂಬಾ ಸಂಬಳ. ಸುಲಭವಾಗಿ ಲೈಫ್ ಸೆಟಲ್ ಮಾಡಿಕೊಳ್ಳುವ ದಾರಿ ಆತನ ಮುಂದಿತ್ತು. ಹಣದ ಹಿಂದೆ ಬಿದ್ದ ಟೆಕ್ಕಿ ಮಹಿಳೆ ಹೆಸರಿನಲ್ಲಿ ನಕಲಿ ಇನ್ ಸ್ಟ್ರಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಮಹಿಳೆಯರನ್ನು ಲೈಂಗಿಕ ಜಾಲಕ್ಕೆ ನೂಕಿದ್ದ ಆರೋಪಿಯನ್ನು ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ದಿಲ್ಲಿಪ್ರಸಾದ್ ಬಂಧಿತನಾಗಿದ್ದು ಕೋರಮಂಗಲದಲ್ಲಿ ವಾಸವಾಗಿದ್ದ. ಖಾಸಗಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿಯಲು ನಿರ್ಧರಿಸಿ ಇನ್ ಸ್ಟ್ರಾಗ್ರಾಮ್ ನಲ್ಲಿ ಮೋನಿಕಾ, ಮ್ಯಾನೇಜರ್ ಸೇರಿದಂತೆ ಐದಕ್ಕಿಂತ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿಸಿ ಯುವತಿ ಹಾಗೂ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ತಾನು ಎಂಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ನನಗೆ ಗೊತ್ತಿರುವ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈ ಮಾತನ್ನ ನಂಬಿ ಆರೋಪಿ ಹೇಳಿದ ಜಾಗಕ್ಕೆ ಬರುತ್ತಿದ್ದರು. ಪೂರ್ವಾಸಂಚಿನಂತೆ ಮಡಿವಾಳದ ಓಯೊ ರೂಮ್ ನ್ನ ಬುಕ್ ಮಾಡಿ ರೂಮ್ ನಲ್ಲಿ ಸಂದರ್ಶನ ನಡೆಯಲಿದೆ ಎಂದು ಒಳಗೆ ಕರೆಯಿಸಿಕೊಳ್ಳುತ್ತಿದ್ದ. ಆದರೆ ಒಳಗೆ ನೋಡಿದಾಗ ಚಿತ್ರಣವೇ ಬದಲಾಗಿತ್ತು. ಸಂದರ್ಶನ ನಡೆಸುವ ಬದಲು ಲೈಂಗಿಕವಾಗಿ ಸಹಕರಿಸಿದರೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಪುಸಲಾಯಿಸುತ್ತಿದ್ದ. ಇಚ್ಚೆಗೆ ವಿರೋಧವಾಗಿ ಬಳಿಕ ಲೈಂಗಿಕ ಕ್ರಿಯೆ ನಡೆಸಿ ಅದರ ವಿಡಿಯೊವನ್ನ ರಹಸ್ಯವಾಗಿ ಸೆರೆಹಿಡಿದುಕೊಳ್ಳುತ್ತಿದ್ದ. ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.. ಇದೇ ರೀತಿ ಸುಮಾರು 10 ಕ್ಕಿಂತ ಹೆಚ್ಚಿನ ಯುವತಿಯರನ್ನ ಕೆಲಸ ಕೊಡಿಸುವುದಾಗಿ ನಂಬಿಸಿ ದುರ್ಬಳಕೆ ಮಾಡಿಕೊಂಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಆಂಧ್ರ ಯುವತಿಯರೇ ಈತನ ಟಾರ್ಗೆಟ್
ನಕಲಿ ಖಾತೆ ಸೃಷ್ಟಿಸಿ ಮಹಿಳೆಯ ಪೋಟೊಗಳನ್ನ ಡಿಪಿಗೆ ಹಾಕಿಕೊಂಡು ಆಂಧ್ರ ಮೂಲದ ಯುವತಿಯರು ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಇನ್ಸ್ಟ್ರಾಗ್ರಾಮ್ ಮೂಲಕ ಮಹಿಳೆಯರನ್ನ ಪರಿಚಯಿಸಿಕೊಳ್ಳುತ್ತಿದ್ದ. ಉದ್ಯೋಗದ ಅನಿವಾರ್ಯತೆ ಇದ್ದವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ. ಇಂತಹ ದಿನದಂದು ಸೂಚಿಸಿದ ಸ್ಥಳಕ್ಕೆ ಬಂದರೆ ಕಂಪೆನಿಯವರ ಸಂದರ್ಶನ ನಡೆಸಲಿದ್ದಾರೆ ಎಂದು ಸುಳ್ಳು ಹೇಳಿ ನಗರಕ್ಕೆ ಕರೆಯಿಸಿಕೊಂಡು ವಂಚಿಸುತ್ತಿದ್ದ. ಈ ಸಂಬಂಧ ದೂರು ಬಂಧ ಆಧಾರದ ಮೇರೆಗೆ ಐಟಿ ಆ್ಯಕ್ಟ್ ನಡಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತನ ಮೊಬೈಲ್ ಪರಿಶೀಲಿಸಿದಾಗ ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ಮೋಸದ ಜಾಲದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಹಲವು ಮಹಿಳೆಯರೊಂದಿಗೆ ಹಲವು ರೀತಿಯ ಸಂಬಂಧ ಹೊಂದಿರುವುದು ಗೊತ್ತಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.