Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬಿಬಿಎಂಪಿ ಕಂದಾಯ ಬಾಕಿ ಉಳಿಸಿಕೊಂಡ ಹಿನ್ನೆಲೆ ಪಶ್ಚಿಮ ವಲಯ ಅಧಿಕಾರಿಗಳು ಮಾಲ್ ಗೆ ಬೀಗ ಜಡಿದರು. ಎಚ್ಚತ್ತ ಮಾಲ್ ಮಾಲೀಕರು 5 ಕೋಟಿ ರೂ. ಕಂದಾಯ ಪಾವತಿಸಿದ್ದು, ತೆರೆಯಲು ಅವಕಾಶ ನೀಡಲಾಯಿತು.
ಮಂತ್ರಿ ಮಾಲ್ ಬರೋಬ್ಬರಿ 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಕೇವಲ 5 ಕೋಟಿ ರೂ. ಡಿಡಿ ಪಾವತಿ ಮಾಡಿದ ಕೂಡಲೇ ಬೀಗ ತೆರೆಯಲು ಅವಕಾಶ ಕೊಟ್ಟಿದೆ. ಬಿಬಿಎಂಪಿಯ ಈ ನಡೆ ಸಾರ್ವಜನಿಕರ ಟೀಕೆಗೆ ಒಳಗಾಗಿದೆ.
2017 ರಿಂದಲೂ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಹಣವೂ ಸೇರಿ 39 ಕೋಟಿ ರೂ ಬಾಕಿಯಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಮಂತ್ರಿ ಮಾಲ್ ಆಡಳಿತ ವರ್ಗಕ್ಕೆ ಈ ಹಿಂದೆಯೂ ಬೀಗ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ತೆರೆಯಲು ಅನುಮತಿಸಿದ್ದರು. ಗುರುವಾರ ಮತ್ತೆ ತೆರಿಗೆ ಸಂಗ್ರಹ ಅಭಿಯಾನದ ಭಾಗವಾಗಿ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ಗೆ ಬೀಗ ಹಾಕಿ, ಸ್ವಲ್ಪ ತೆರಿಗೆ ಪಾವತಿಸಿದ ಬಳಿಕ ತೆರೆಯಲು ಅವಕಾಶ ಕೊಟ್ಟರು.