Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕ ರದ್ದಾದರೂ ಗೊಂದಲ ಮಾತ್ರ ಮುಗಿಯುವ ಲಕ್ಷಣಗಳು ಕಾಣಿಸ್ತಿಲ್ಲ. ಸರ್ಕಾರ, ರಾಜ್ಯಪಾಲರಿಂದ ಇನ್ನೂ ಯಾವುದೇ ನಿರ್ದೇಶನ ಸಿಕ್ಕಿಲ್ಲ. ಹೀಗಾಗೀ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು ಗೊಂದಲದಲ್ಲಿದ್ದು, ಸಭೆಗಳ ಮೇಲೆ ಸಭೆ ಮಾಡಿ, ಸರ್ಕಾರಕ್ಕೆ ಪತ್ರ ಬರೆಯಲು ಸಜ್ಜಾಗಿದ್ದಾರೆ. ಆದ್ರೆ ಇತ್ತ ವಿಸಿ ಇಲ್ಲದೇ ಬೆಂಗಳೂರು ವಿಶ್ವವಿದ್ಯಾಲಯ ಅನಾಥವಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸ್ಥಾನಕ್ಕೆ ಪ್ರೊ.ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ಎರಡು ದಿನಗಳು ಕಳೆದ್ರೂ ಸರ್ಕಾರ ಮತ್ತು ರಾಜ್ಯಪಾಲರಿಂದ ಮುಂದೆನು ಮಾಡ್ಬೇಕು ಅನ್ನೋದ್ರ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗೀ ವಿವಿಯ ಅಧಿಕಾರಿಗಳು ಪೇಚೆಗೆ ಸಿಲುಕಿದ್ದಾರೆ. ಹೀಗಾಗೀ ವಿವಿಯ ಸಿಂಡಿಕೇಟ್ ಸದಸ್ಯರು ಸಭೆಗಳ ಮೇಲೆ ಸಭೆ ಮಾಡಿ, ಈ ಅನಿಶ್ಚಿತತೆಯ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಕೋರಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ರೀತಿ ಹುದ್ದೆ ಖಾಲಿ ಇರೋದ್ರಿಂದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ವಿವಿಯ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಸರ್ಕಾರ, ರಾಜ್ಯಪಾಲರು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಕೂಡಲೇ ಹೊಸ ಕುಲಪತಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು, ಅಲ್ಲಿಯವರೆಗೆ ವಿವಿಯ ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿಯ ಹಿರಿಯ ಡೀನ್ ಅವರನ್ನೇ ರಾಜ್ಯಪಾಲರು ಹಂಗಾಮಿ ಕುಲಪತಿಯನ್ನು ನೇಮಕ ಮಾಡಬೇಕು ಎಂದು ಬೆಂ.ವಿವಿಯ ಸಿಂಡಿಕೇಟ್ ಸದಸ್ಯರು ಒತ್ತಾಯಿಸಿದ್ದಾರೆ. ಆದ್ರೆ ಇತ್ತ ವಿವಿಯಲ್ಲಿ ಕಡತಗಳು ವಿಲೇವಾರಿಯಾಗದೇ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿಯ ಸದಸ್ಯರಿಗೆ ಸಮಸ್ಯೆಯಾಗಿದೆ.ವಿವಿ ಯಲ್ಲಿ ಕುಲಪತಿಗಳು ಯಾರು ಎಂಬುದೇ ಗೊತ್ತಿಲ್ಲದೇ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಕುಲಪತಿ ಯಾರು ಅಂದ್ರೆ ವಿವಿಯಲ್ಲಿ ಎಲ್ಲಾರು ಗೊತ್ತಿಲ್ಲ ಅಂತಿದ್ದಾರೆ.
ಬೆಂಗಳೂರು ವಿವಿ ಒಂದಿಲ್ಲೊಂದು ವಿಚಾರದಲ್ಲಿ ಚರ್ಚೆಯಲ್ಲಿ ಇದ್ದೇ ಇರುತ್ತೆ. ಈಗ ವಿಸಿ ನೇಮಕ ಯಾವಾಗ ಆಗುತ್ತೆ,,,? ಹಂಗಾಮಿ ವಿಸಿ ಯಾರಾಗ್ತಾರೆ, ಸರ್ಕಾರ ಏನ್ ನಿರ್ದೇಶನ ನೀಡುತ್ತೆ ಅಂತಾ ಕಾದು ನೋಡ್ಬೇಕು.