Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಭೂ ವ್ಯಾಜ್ಯವೊಂದರಲ್ಲಿ ತಮ್ಮ ಪರ ಆದೇಶ ನೀಡಲು 5 ಲಕ್ಷ ರೂ. ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅವರ ಜಾಮೀನು ಅರ್ಜಿ ಇನ್ನೂ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ.
ಮೂರು ದಿನಗಳಲ್ಲಿ ನ್ಯಾ. ಸಂದೇಶ್ ಅವರಿದ್ದ ಏಕಸದಸ್ಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.
ಇದೇ ಪ್ರಕರಣದ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪತಹಸೀಲ್ದಾರ್ ಪಿ.ಎಸ್. ಮಹೇಶ್ ಜಾಮೀನು ಅರ್ಜಿ ಗುರುವಾರ ವಿಚಾರಣೆಗೆ ಬರಲಿದ್ದು, ಅದರ ಜೊತೆ ಜೆ.ಮಂಜುನಾಥ್ ಜಾಮೀನು ಅರ್ಜಿಯನ್ನೂ ಸಹ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.
ಹೈಕೋರ್ಟ್ ಚಾಟಿ ನಂತರ ಬಂಧನ: ಲಂಚ ಆರೋಪ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಮೇಲ್ನೋಟಕ್ಕೆ ಸ್ಪಷ್ಟ ಸಾಕ್ಷ್ಯವಿದ್ದರೂ ಕ್ರಮ ಕೈಗೊಳ್ಳದ ಭ್ರಷ್ಟಚಾರ ನಿಗ್ರಹ ದಳದ ಕಾರ್ಯವನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು.
''ನೀವು(ಎಸಿಬಿ) ಸಣ್ಣ ಪುಟ್ಟ ಜನರನ್ನು ಹಿಡಿಯುತ್ತೀರಿ, ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಾಗೆಯೇ ಬಿಡುತ್ತೀರಿ. ಇದು ಸರಿಯೇ, ಕಾನೂನು ಎಲ್ಲರಿಗೂ ಒಂದೇ, ಯಾವುದೇ ಅಧಿಕಾರಿಯ ಮುಲಾಜಿಗೆ ಒಳಗಾಗದೆ ಕಾರ್ಯನಿರ್ವಹಿಸಬೇಕು'' ಎಂದು ಎಸಿಬಿ ಮತ್ತು ಅದರ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಹರಿಹಾಯ್ದಿತ್ತು.