Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಲಬುರಗಿ : ಊಟ ಕೇಳಿದ 4 ವರ್ಷದ ಮುಗ್ಧ ಮಗುವಿನ ಕೈಯನ್ನು ಕೆಂಡದ ಕಿಡಿಯಿಂದ ಮಲತಾಯಿ ಮನಬಂದಂತೆ ಸುಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ತಾಂಡಾ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ನಾಲವಾರ ತಾಂಡಾದ ತಿಪ್ಪಣ್ಣ ಎಂಬುವರು ಪತ್ನಿ ಮರಣ ನಂತರ ಪುತ್ರಿ ಸೋನಾಲಿಕಾಗೆ ಅಮ್ಮನ ಪ್ರೀತಿ ಸಿಗಬೇಕೆಂದು ಮರೆಮ್ಮಳನ್ನು 2ನೇ ಮದುವೆ ಆಗಿದ್ದರು. ಆದರೆ, ಕೆಲಸದ ನಿಮಿತ್ತ ತಿಪ್ಪಣ್ಣ ಪೂನಾಗೆ ಹೋಗಿದ್ದು, ಇತ್ತ ಸೋನಾಲಿಕಾಗೆ ಮರೆಮ್ಮ ಮನಬಂದಂತೆ ಹಿಂಸಿಸುತ್ತಿದ್ದಾಳೆ.
ನಾಲ್ಕು ವರ್ಷ ಸೋನಲಿಕ ಮಲತಾಯಿಗೆ ಊಟ ಕೇಳಿದರೆ ಹೊಡೆಯುವುದು, ಬಡಿಯುವುದು, ಮಂಚಕ್ಕೆ ಕಟ್ಟಿ ಹಾಕುವುದು, ಮೈ ಕೈ ಸುಡುವುದು ಮಾಡಿದ್ದಾಳೆ. ದಿನನಿತ್ಯ ಹೀಗೆ ಕಿರುಕುಳ ನೀಡುತ್ತಿದ್ದನ್ನು ನೋಡುತ್ತಿದ್ದ ಜನ ಕಳೆದ 3-4 ದಿನಗಳಿಂದ ಆಟವಾಡಲು ಮಗು ಹೊರಗೆ ಬರದೇ ಇರುವುದರಿಂದ ಸಂಶಯಗೊಂಡು ಮನೆಗೆ ಹೋಗಿದ್ದಾರೆ.
ಈ ವೇಳೆ ಮಂಚಕ್ಕೆ ಮಗುವನ್ನು ಕಟ್ಟಿ ಹಾಕಿರುವುದನ್ನು ಗಮನಿಸಿ ನಂತರ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ಮಗುವಿನ ಎರಡು ಕೈಗಳನ್ನು ಕೆಂಡದ ಕಿಡಿಯಿಂದ ಸುಟ್ಟಿರುವುದು ಬೆಳಕಿಗೆ ಬಂದಿದೆ.