Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಾಕಷ್ಟು ವಿವಾದ ಸೃಷ್ಟಿಸಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ. ಜಾಮಿಯಾ ಮಸೀದಿಯ ಒಳಭಾಗದಲ್ಲಿ ನಡೆಯುತ್ತಿರುವ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಮಂಡ್ಯ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ. ಐತಿಹಾಸಿಕ ಸ್ಥಳವಾಗಿರುವ ಜಾಮಿಯಾ ಮಸೀದಿ ಅಲ್ಲ, ಅದು ಮಂದಿರ ಎಂದು ಅತ್ತ ಬಜರಂಗಸೇನೆ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟವನ್ನು ಆರಂಭಿಸಿದೆ. ಇತ್ತ ಹಿಂದೂ ಜಾಗರಣ ವೇದಿಕೆ ಮಸೀದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದರಸಾ ತೆರವಿಗೆ ಹೋರಾಟವನ್ನು ಆರಂಭಿಸಿದೆ. 1934 ರಲ್ಲಿ ಜಾಮಿಯಾ ಮಸೀದಿ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಮದರಸಾದಂತಹ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಹೀಗಿದ್ದರೂ ಕೂಡ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ನಡೆಸಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಹಿಂದೂಪರ ಸಂಘಟನೆಗಳು ಅಕ್ರಮ ಮದರಸಾ ತೆರವು ಮಾಡಬೇಕೆಂದು ಆಗ್ರಹ ಮಾಡುತ್ತಿವೆ. ಇಷ್ಟಾದರೂ ಕೂಡ ಕ್ರಮ ಕೈಗೊಳ್ಳದ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಗಡುವು ನೀಡಿದೆ.