Publish Date: Thu, 17 Feb 2022 (17:36 IST)
Updated Date: Thu, 17 Feb 2022 (18:49 IST)
ಸಾಲ ತೀರಿಸಲು ಸಹಾಯ ಮಾಡಿದ ಸಂಬಂಧಿಯನ್ನು ಮನೆಗೆ ಕರೆಸಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಆಂಧ್ರಪ್ರದೇಶದ ಬಳಿ ಬಿಸಾಡಿ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶ ಮೂಲದ ಶೇಕ್ ಬಿ.ಡಿ.ಮೊಹಮದ್ ಗೌಸ್ (39) ಮತ್ತು ಕೌಸರ್ ಅಲಿಯಾಸ್ ಹೀನಾ (27) ಬಂಧಿತ ದಂಪತಿ.
ಆರೋಪಿ ದಂಪತಿ 2012ರಲ್ಲಿ ವಿವಾಹವಾಗಿ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದು ತದನಂತರ ಬೆಂಗಳೂರಿಗೆ ಬಂದು ಹೆಗ್ಗನಹಳ್ಳಿಯ ಗಜಾನನ ನಗರದ 10ನೆ ಅಡ್ಡರಸ್ತೆ ಯ ಕಟ್ಟಡವೊಂದರ 3ನೆ ಮಹಡಿಯ ಮನೆಯಲ್ಲಿ ವಾಸವಾಗಿದ್ದರು.
ಆರೋಪಿ ಶೇಖ್ ಮನೆಯಲ್ಲೇ ಹೊಲಿಗೆ ಯಂತ್ರ ಇಟ್ಟುಕೊಂಡು ಗಾರ್ಮೆಂಟ್ಸ್ಗಳಿಗೆ ಪೀಸ್ ವರ್ಕ್ ಮಾಡುವ ವ್ಯವಹಾರ ಮಾಡಿಕೊಂಡಿದ್ದನು. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಹೆಗ್ಗನಹಳ್ಳಿಯ ಮೌಲ್ವಿಯೊಬ್ಬರ ಬಳಿ ಸಾಲ ಮಾಡಿಕೊಂಡಿದ್ದನು. ಈ ಸಾಲವನ್ನು ತೀರಿಸಲಾಗದೆ ಹೈದ್ರಾಬಾದ್ಗೆ ಹೋಗಿದ್ದನು. ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರಿಂದ ಕೌಸರ್ನ ಸಂಬಂಧಿ ವಜೀರ್ ಪಾಷಾ ಸಾಲ ತೀರಿಸಲು ಸಹಾಯ ಮಾಡಿದ್ದಾನೆ.
ಸಾಲದ ಬದಲಾಗಿ ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಕೌಸರ್ಗೆ ಒತ್ತಾಯಿಸಿ ಬಲವಂತವಾಗಿ ಆಕೆಯ ಸಂಪರ್ಕ ಬೆಳೆಸಿದ್ದನು. ಈ ವಿಷಯ ಪತಿ ಶೇಕ್ಗೆ ಗೊತ್ತಾದಾಗ ವಜೀರ್ ಪಾಷಾನಿಂದ ಕೌಸರ್ ಅಂತರ ಕಾಯ್ದುಕೊಂಡಿದ್ದಳು.
ಇದರಿಂದ ಕೋಪಗೊಂಡ ವಜೀರ್ ಪಾಷಾ ತಾನು ಕೊಟ್ಟಿದ್ದ ಹಣವನ್ನು ವಾಪಸ್ ಕೊಡುವಂತೆ ಆಗಾಗ್ಗೆ ಪೀಡಿಸುತ್ತಿದ್ದರಿಂದ ಆತನ ಕೊಲೆ ಮಾಡಲು ದಂಪತಿ ಸಂಚು ರೂಪಿಸಿದರು. ಅದರಂತೆ 2015 ಮೇ 13 ರಂದು ಶೇಖ್ ಮೊಹಮ್ಮದ್ ಗೌಸ್ ಮನೆಯಲ್ಲಿ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದನು.
ಪತ್ನಿ ಕೌಸರ್ ಮೂಲಕ ವಜೀರ್ ಪಾಷಾನನ್ನು ಅಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಮನೆಗೆ ಕರೆಸಿಕೊಂಡಿದ್ದು ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗ ಮೊದಲೇ ಅಂದುಕೊಂಡಂತೆ ಕೌಸರ್ ಸೀರೆಯಿಂದ ಆತನ ಕೊರಳಿಗೆ ಸುತ್ತಿದ್ದಾಳೆ. ಆ ಸಂದರ್ಭದಲ್ಲಿ ಮಂಚದ ಕೆಳಗೆ ಅವಿತುಕೊಂಡಿದ್ದ ಶೇಖ್ ಮೊಹಮ್ಮದ್ ಗೌಸ್ ಆರೋಪಿ ಮೇಲೆ ಬಂದು ಕೊರಳಿಗೆ ಹಾಕಿದ್ದ ಸೀರೆಯನ್ನು ಇಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಎಳೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
geetha
Publish Date: Thu, 17 Feb 2022 (17:36 IST)
Updated Date: Thu, 17 Feb 2022 (18:49 IST)