Publish Date: Wed, 11 Dec 2019 (09:15 IST)
Updated Date: Wed, 11 Dec 2019 (09:17 IST)
ಬೆಂಗಳೂರು: ಹೈದರಾಬಾದ್ ಎನ್ ಕೌಂಟರ್ ವಿಚಾರದಲ್ಲಿ ಟ್ರೋಲ್ ಗೊಳಗಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ತಮ್ಮನ್ನು ಟೀಕಿಸಿದವರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.
ಹೈದರಾಬಾದ್ ನಲ್ಲಿ ಎನ್ ಕೌಂಟರ್ ಆದವರೇ ನಿಜವಾಗಿಯೂ ರೇಪಿಸ್ಟ್ ಗಳೇ? ಅಥವಾ ಇವರ ಹಿಂದೆ ಪ್ರಭಾವಿಗಳ ಕೈವಾಡವಿದೆಯೇ? ಎಲ್ಲಾ ಪ್ರಭಾವಿಗಳಿಗೂ ಇದೇ ರೀತಿಯ ಶಿಕ್ಷೆಯಾಗುತ್ತಾ ಎಂದು ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದರು. ಎನ್ ಕೌಂಟರ್ ಮಾಡುವುದನ್ನೇ ವಿರೋಧಿಸುತ್ತಿರುವುದಕ್ಕೆ ಸಾಕಷ್ಟು ಜನ ಉಪೇಂದ್ರರನ್ನು ಟೀಕಿಸಿದ್ದರು.
ಇದಕ್ಕೆಲ್ಲಾ ಉಪೇಂದ್ರ ಈಗ ಉತ್ತರ ಕೊಟ್ಟಿದ್ದಾರೆ. ‘ಎನ್ ಕೌಂಟರ್ ಗಳು ಪ್ರಭಾವಿಗಳಿಂದ ದುರುಪಯೋಗವಾಗಬಾರದು, ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ಚುರುಕುಗೊಳಿಸಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ನಾನೂ ಒಂದು ಹೆಣ್ಣು ಮಗುವಿನ ತಂದೆ, ಅತ್ಯಾಚಾರಿಗಳ ಪರವಾಗಿ ಮಾತನಾಡಿದೆ ಎಂದು ಬಿಂಬಿಸುವಂತಹ ಹೇಯ ಮನಸ್ಸಿನ ಜನ ಈ ಸಮಾಜದಲ್ಲಿ (ಕೆಲವರು ನನ್ನ ಜತೆಗೇ) ಇದ್ದಾರಲ್ಲಾ ಎಂದು ನೋವಾಗುತ್ತಿದೆ’ ಎಂದು ಉಪೇಂದ್ರ ಬೇಸರದಿಂದಲೇ ತಮ್ಮ ಮೊದಲಿನ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.