Publish Date: Tue, 27 Oct 2020 (09:13 IST)
Updated Date: Tue, 27 Oct 2020 (09:58 IST)
ದುಬೈ: ಐಪಿಎಲ್ 13 ರಲ್ಲಿ ತಂದೆ ಸಾವಿಗೀಡಾದರೂ ಆ ದುಃಖವನ್ನು ನುಂಗಿ ತಂಡಕ್ಕಾಗಿ ಆಡಿದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಕತೆಯನ್ನು ಕೇಳಿದ್ದೇವೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಕೆಕೆಆರ್ ವಿರುದ್ಧ ಅದ್ಭುತ ಜಯ ಗಳಿಸಿಕೊಟ್ಟ ಬ್ಯಾಟ್ಸ್ ಮನ್ ದೀಪ್ ಸಿಂಗ್ ಕೂಡಾ ಅಂತಹದ್ದೇ ಸ್ಥಿತಿಯಲ್ಲಿ ಆಡಿದ್ದು ಬಹಿರಂಗವಾಗಿದೆ.
ಮನ್ ದೀಪ್ ಸಿಂಗ್ ತಂದೆ ಲಿವರ್ ಸಮಸ್ಯೆಯಿಂದಾಗಿ ಮೊನ್ನೆಯಷ್ಟೇ ಸಾವಿಗೀಡಾಗಿದ್ದರು. ಆದರೆ ಮಯಾಂಕ್ ಅಗರ್ವಾಲ್ ಗಾಯಗೊಂಡಿದ್ದರಿಂದ ಪಂಜಾಬ್ ಗೆ ಮನ್ ದೀಪ್ ಆರಂಭಿಕರಾಗಿ ಕಣಕ್ಕಿಳಿಯುವುದು ಅನಿವಾರ್ಯವಾಗಿತ್ತು. ಹೀಗಾಗಿ ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳದೇ ತಂಡದ ಪರ ನಿನ್ನೆಯ ಪಂದ್ಯವಾಡಿದ್ದಲ್ಲದೆ, ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದರು. ಅಜೇಯ 66 ರನ್ ಗಳಿಸಿದ ಮನ್ ದೀಪ್ ಈ ಇನಿಂಗ್ಸ್ ನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ. ಅವರು ನಾನು ಯಾವತ್ತೂ ನಾಟೌಟ್ ಆಗಿ ಇರಬೇಕೆಂದು ಬಯಸಿದ್ದರು. ಅದು ಇಂದು ಸಾಧ್ಯವಾಗಿದೆ ಎಂದು ದುಃಖದಿಂದಲೇ ಹೇಳಿಕೊಂಡಿದ್ದಾರೆ. ಇನ್ನು, ಮನ್ ದೀಪ್ ಸಾಧನೆ ಕೊಂಡಾಡಿರುವ ಸಹ ಆಟಗಾರ ಕ್ರಿಸ್ ಗೇಲ್ ಅಪ್ಪನಿಗಾಗಿ ಆಡಿದ ಅವರ ಅರ್ಪಣಾ ಮನೋಭಾವಕ್ಕೆ ಸಲಾಂ ಎಂದಿದ್ದಾರೆ.