Publish Date: Sun, 26 Mar 2023 (09:35 IST)
Updated Date: Sun, 26 Mar 2023 (07:37 IST)
ರಾಮನಗರ : ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಆದಾಗಿನಿಂದ ಒಂದಲ್ಲ ಒಂದು ಸಮಸ್ಯೆಯಿಂದ ಸುದ್ದಿಯಾಗುತ್ತಿದೆ. ಈಗ ತಾಂತ್ರಿಕ ಸಮಸ್ಯೆಯಿಂದ ಟೋಲ್ ಪ್ಲಾಜಾದಲ್ಲಿ ವಾಹನ ಸವಾರರ ಫಾಸ್ಟ್ ಟ್ಯಾಗ್ನಿಂದ ಪದೇ ಪದೇ ಹಣ ಕಡಿತಗೊಂಡು ಮತ್ತೆ ಸುದ್ದಿಯಾಗಿದೆ.
ಮಂಡ್ಯ ಮೂಲದ ತ್ಯಾಗರಾಜ್ ಎಂಬವರು ಕಾರಿನಲ್ಲಿ ಒಮ್ಮೆ ಕಣಮಿಣಕಿ ಟೋಲ್ ಪ್ಲಾಜಾ ಪ್ರವೇಶ ಮಾಡಿದಾಗ ಫಾಸ್ಟ್ ಟ್ಯಾಗ್ ಮೂಲಕ 135 ರೂ. ಕಡಿತವಾಗಿದೆ. ಸಂಜೆ ವೇಳೆಗೆ ಕಾರು ಟೋಲ್ ಬಳಿ ಸಂಚಾರ ಮಾಡದಿದ್ದರೂ ಮತ್ತೆ ಹಣ ಕಡಿತವಾಗಿದೆ.
ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ 135 ರೂ.ನಂತೆ ಹಣ ಕಡಿತವಾಗಿದೆ. ನಿತ್ಯವೂ ಇದೇ ರೀತಿಯ ತಾಂತ್ರಿಕ ಸಮಸ್ಯೆಯಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರು ಗಲಾಟೆ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ. ಟೋಲ್ನಲ್ಲಿ ಕೆಲವು ವಾಹನಗಳ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗುವುದರಲ್ಲಿ ತೊಂದರೆ ಆಗುತ್ತಿದೆ. ಮತ್ತೊಂದೆಡೆ ಪದೇ ಪದೇ ಹಣ ಕಡಿತವಾಗುತ್ತಿದೆ.