Publish Date: Sat, 27 Nov 2021 (09:50 IST)
Updated Date: Sat, 27 Nov 2021 (09:54 IST)
ನೆಗಡಿ ಬಂದರೆ ಸಾಕು ತಕ್ಷಣವೇ ಕೆಮ್ಮು ಬಂದು ಬಿಡುತ್ತೆ. ಕೆಮ್ಮಿನಿಂದ ರಾತ್ರಿಯೆಲ್ಲಾ ನಿದ್ದೆಇಲ್ಲದೇ ಪರಿತಪಿಸಬೇಕಾಗುತ್ತದೆ.
ಮುಖ್ಯವಾಗಿ ಕೆಮ್ಮು ದೇಹದಿಂದ ಉದ್ರೇಕಕಾರಿಗಳು ಮತ್ತು ಸೋಂಕುಗಳನ್ನು ತೆರವುಗೊಳಿಸುವಲ್ಲಿ ಪಾತ್ರವಹಿಸುತ್ತದೆ. ಆದರೆ ನಿರಂತರ ಕೆಮ್ಮು ಕಿರಿಕಿರಿ ಉಂಟು ಮಾಡದೇ ಇರದು.
ಜೇನು ತುಪ್ಪದಲ್ಲಿನ ಆಂಟಿ ಬ್ಯಾಕ್ಟೀರಿಯಾ ಗುಣವು ಕೆಮ್ಮನ್ನು ಪರಿಣಾಮಕಾರಿಯಾಗಿ ಶಮನ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವು ಕೆಮ್ಮಿಗೆ ರಾಮಬಾಣ ಎಂದು ಸಂಶೋಧನೆಗಳಿಂದಲೇ ಸಾಬೀತಾಗಿದೆ. ಒಂದು ವರ್ಷದ ಮೇಲಿನ ಮಕ್ಕಳು ಹಾಗು ವಯಸ್ಕರಿಗೆ ಹಗಲು ಮತ್ತು ರಾತ್ರಿ ಎರಡು ಬಾರಿ ಜೇನುತುಪ್ಪವನ್ನು ನೀಡಬಹುದು. ಬೆಚ್ಚಗಿನ ನೀರು ಅಥವಾ ಚಹಾದಲ್ಲಿ ಬೆರಸಿ ಕುಡಿಯಬಹುದು. ಒಂದು ವರ್ಷದ ಒಳಗಿನ ಮಕ್ಕಳಿಗೆ ಜೇನುತುಪ್ಪ ನೀಡಲು ಶಿಫಾರಸ್ಸು ಮಾಡುವುದಿಲ್ಲ.
ಶುಂಠಿ
ಶುಂಠಿಯ ಪ್ರಯೋಜನ ಶತಮಾನಗಳಿಂದ ಸಾಬೀತಾಗುತ್ತಿದೆ. ಮುಖ್ಯವಾಗಿ ಶುಂಠಿಯು ಒಣ ಅಥವಾ ಅಸ್ತಮಾ ಕೆಮ್ಮನ್ನು ಕೂಡ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಇದರಲ್ಲಿನ ಊರಿಯೂತದ ಲಕ್ಷಣವು ವಾಕರಿಕೆ, ನೋವು, ಕೆಮ್ಮು ನಿವಾರಣೆ ಮಾಡುತ್ತದೆ. ನೀವು ತಾಜಾ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು. ರುಚಿಯನ್ನು ಹೆಚ್ಚಿಸಲು ಬೆಲ್ಲ ಮತ್ತು ನಿಂಬೆ ಹಣ್ಣನ್ನು ಮಿಶ್ರಣ ಮಾಡಬಹುದು. ಇದರಿಂದ ನಿಮ್ಮ ಕೆಮ್ಮ ಥಟ್ಟನೆ ನಿಂತು ಹೋಗುತ್ತದೆ.
ಅರಿಶಿನ
ಅರಿಶಿನವು ಕುರ್ಕ್ಯುಮಿನ್, ಉರಿಯೂತ, ಆಂಟಿವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಕೂಡ ಹೊಂದಿದೆ. ಕೆಮ್ಮನ್ನು ಪರಿಣಾಮಕಾರಿಯಾಗಿ ತೊಲಗಿಸಲು ಅರಿಶಿಣವು ಪ್ರಯೋಜನಕಾರಿಯಾಗಿದೆ. ಹಾಲಿನೊಂದಿಗೆ ಅರಿಶಿಣವನ್ನು ಬೆರಸಿ ಸೇವಿಸಬಹುದು ಅಥವಾ ಒಂದು ಲೋಟ ನೀರಿಗೆ ಅರಿಶಿಣ ಮತ್ತು ಕರಿಮೆಣಸು ಸೇರಿಸಿ ಕಷಾಯ ಮಾಡಿಕೊಂಡು ಸೇವಿಸುವುದರಿಂದ ಕೆಮ್ಮು ತಕ್ಷಣ ಕಡಿಮೆಯಾಗುತ್ತದೆ.
ಪುದೀನಾ ಚಹಾ
ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಮತ್ತುಆಂಟಿವೈರಲ್ ಗುಣಗಳನ್ನು ಹೊಂದಿದೆ. ಇದು ದೇಹಕ್ಕೆ ಅನೇಕ ರೀತಿಯ ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ. ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಪುದೀನಾ ಚಹಾ ಕುಡಿಯಿರಿ. ಒಂದು ಲೋಟ ನೀರಿಗೆ ಶುದ್ಧವಾಗಿ ತೊಳೆದ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿ, ರುಚಿಗೆ ಜೇನುತುಪ್ಪ ಅಥವಾ ಬೆಲ್ಲವನ್ನು ಬೆರಸಿ ಕುಡಿಯಿರಿ.