Publish Date: Fri, 30 Jul 2021 (08:50 IST)
Updated Date: Fri, 30 Jul 2021 (09:02 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ತೃತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ಹೀನಾಯವಾಗಿ ಸೋತಿದೆ.
ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಲಂಕಾ ಪಾಲಾಗಿದೆ. ಅಸಲಿಗೆ ಈ ಸರಣಿಯಲ್ಲಿ ಭಾರತಕ್ಕೆ ಕಾಡಿದ್ದು, ಎದುರಾಳಿ ಆಟಗಾರರಲ್ಲ! ಬದಲಾಗಿ ಕೊರೋನಾ! ಮೊದಲ ಟಿ20 ಗೆದ್ದಿದ್ದ ಟೀಂ ಇಂಡಿಯಾಗೆ ಬಳಿಕ ಕೊರೋನಾ ಕಾಡಿತು. ಕೊರೋನಾದಿಂದಾಗಿ ಪ್ರಮುಖ ಆಟಗಾರರು ಉಳಿದ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗದೇ ಇದ್ದಿದ್ದು, ಭಾರತಕ್ಕೆ ದೊಡ್ಡ ಹೊಡೆತ ನೀಡಿತು.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಕುಲದೀಪ್ ಯಾದವ್ 23 ರನ್ ಗಳಿಸದೇ ಹೋಗಿದ್ದಲ್ಲಿ ಭಾರತ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಅವಮಾನಕ್ಕೆ ಗುರಿಯಾಗುತ್ತಿತ್ತು.
ಭಾರತ ನೀಡಿದ ಸುಲಭ ರನ್ ಗುರಿಯನ್ನು ಬೆನ್ನತ್ತಿದ ಲಂಕಾ ಆರಂಭದಲ್ಲಿ 3 ವಿಕೆಟ್ ಕಳೆದುಕೊಂಡರೂ ಬಳಿಕ 14.3 ಓವರ್ ಗಳಲ್ಲೇ 3 ವಿಕೆಟ್ ನಷ್ಟಕ್ಕೆ 82 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ 2 ವಿಕೆಟ್, ವರುಣ್ ಚಕ್ರವರ್ತಿ,ಸಂದೀಪ್ ವಾರಿಯರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು.