Publish Date: Thu, 27 Jan 2022 (08:45 IST)
Updated Date: Thu, 27 Jan 2022 (08:51 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆಯೊಂದಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೋಚ್ ದ್ರಾವಿಡ್ ರನ್ನು ಸಮರ್ಥಿಸಿಕೊಂಡಿದ್ದಾರೆ.
ಕೊಹ್ಲಿ ಇನ್ನಷ್ಟು ದಿನ ಟೀಂ ಇಂಡಿಯಾ ಟೆಸ್ಟ್ ನಾಯಕರಾಗಿ ಮುಂದುವರಿಯಬಹುದಿತ್ತು. ಆದರೆ ಕೆಲವರಿಗೆ ಅವರು ಗೆಲ್ಲುವುದೇ ಇಷ್ಟವಿರಲಿಲ್ಲ ಎಂದು ರವಿಶಾಸ್ತ್ರಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ತಿರುಗೇಟು ನೀಡಿರುವ ಭಜಿ, ನಾವಂತೂ ಕೊಹ್ಲಿ ಇನ್ನೂ ನಾಯಕರಾಗಿ 40 ಟೆಸ್ಟ್ ಗೆಲುವು ಕಂಡು ಯಶಸ್ವೀ ನಾಯಕನಾಗಲಿ ಎಂದೇ ಬಯಸುತ್ತಿದ್ದೆವು. ರವಿಶಾಸ್ತ್ರಿ ಯಾರನ್ನು ಉದ್ದೇಶಿಸಿ ಹೀಗೆ ಹೇಳಿದರೋ ಗೊತ್ತಿಲ್ಲ ಎಂದಿದ್ದಾರೆ.
ಇನ್ನು, ರವಿಶಾಸ್ತ್ರಿಗೆ ಇನ್ನಷ್ಟು ಟಾಂಗ್ ಕೊಟ್ಟಿರುವ ಭಜಿ, ರಾಹುಲ್ ದ್ರಾವಿಡ್ ಕೋಚ್ ಆಗಿರುವಾಗ ಟೀಂ ಇಂಡಿಯಾ ಮೊದಲ ಓವರ್ ನಿಂದಲೇ ಸ್ಪಿನ್ನರ್ ಗಳಿಗೆ ಸಹಾಯ ಮಾಡುವ ಪಿಚ್ ಗಳಲ್ಲಿ ಆಡಬಹುದು ಎಂದು ನನಗನಿಸುತ್ತಿಲ್ಲ. ಬ್ಯಾಟಿಗರಿಗೂ ನೆರವಾಗುವ ಪಿಚ್ ನಲ್ಲಿ ಆಡುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಬ್ಯಾಟಿಗರ ಸಾಧನೆ ಗಮನಿಸಿದರೆ, ನಮ್ಮ ಬ್ಯಾಟಿಗರಿಗೆ ರನ್ ಗಳಿಸುವುದೇ ಮರೆತು ಹೋಗಿದೆ ಎಂದು ಗೊತ್ತಾಗುತ್ತದೆ. ಯಾಕೆಂದರೆ ಕಳೆದ 2-3 ವರ್ಷಗಳಿಂದ ನಮ್ಮ ಬ್ಯಾಟಿಗರು ರನ್ ಮಾಡುತ್ತಲೇ ಇಲ್ಲ. ಬ್ಯಾಟಿಗರು ರನ್ ಗಳಿಸದೇ ಇದ್ದಾಗ ಆಟಗಾರರು ಒತ್ತಡಕ್ಕೆ ಸಿಲುಕುತ್ತಾರೆ. ನೀವು ತವರಿನಲ್ಲಿ ಗೆಲುವು ಕಾಣಬಹುದು ಆದರೆ ಆಟಗಾರರು ಬೆಳೆಯಲ್ಲ ಎಂದು ಭಜಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.