Publish Date: Sat, 25 May 2024 (09:54 IST)
Updated Date: Sat, 25 May 2024 (09:56 IST)
ಬೆಂಗಳೂರು: ಶನಿವಾರ ಬಂತೆಂದರೆ ಶನಿ ದೇವನ ವಾರ ಎಂದೇ ಅರ್ಥ. ಶನಿ ಗ್ರಹದ ವಕ್ರದೃಷ್ಟಿಗೆ ಒಳಗಾಗಿದ್ದರೆ ಈ ದಿನ ಶನಿದೇವರ ಪ್ರಾರ್ಥನೆ, ಪೂಜೆ ಮಾಡುವುದರಿಂದ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು.
ಶನಿ ದೇವನ ಅವಗಣನೆಗೆ ಒಳಗಾದರೆ ಜೀವನದಲ್ಲಿ ಕೈ ಹಿಡಿದ ಕೆಲಸಗಳಲ್ಲಿ ಸೋಲು, ವೃತ್ತಿ ಜೀವನದಲ್ಲಿ ಹಿನ್ನಡೆ, ನಿರುದ್ಯೋಗ ಸಮಸ್ಯೆ, ಕಾರ್ಯರಂಗದಲ್ಲಿ ಅವಮಾನ, ಆರ್ಥಿಕವಾಗಿ ಹಿನ್ನಡೆಯುಂಟಾದೀತು. ಶನಿದೇವನ ಕೃಪಾಕಟಾಕ್ಷಕ್ಕೆ ಒಳಗಾದರೆ ಇದೆಲ್ಲವೂ ಉಲ್ಟಾ ಆಗುವುದು.
ಶನಿ ದೇವರನ್ನು ಒಲಿಸಿಕೊಳ್ಳಲು ಶನಿಯ ಪೂಜೆ, ಮಂತ್ರ ಹೇಳುವುದು, ಕಾಗೆಗೆ ಆಹಾರ ನೀಡುವುದು, ಎಳ್ಳೆಣ್ಣೆ ನೀಡುವುದು, ಆಂಜನೇಯ ಸ್ವಾಮಿಯ ಪೂಜೆ ಮಾಡುವುದು ಮಾಡಿದರೆ ತಕ್ಕಮಟ್ಟಿಗೆ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು. ವಾಸ್ತುಪ್ರಕಾರ ಇನ್ನೊಂದು ಸಣ್ಣ ಕೆಲಸ ಮಾಡುವುದರಿಂದ ಶನಿಯ ವಕ್ರದೃಷ್ಟಿಯಿಂದ ಪಾರಾಗಬಹುದು.
ಕರ್ಮಕಾರಕನಾದ ಶನಿ ನಮ್ಮ ಕರ್ಮ ಫಲಗಳಿಗೆ ಅನುಸಾರವಾಗಿ ಒಳಿತು-ಕೆಡುಕು ಮಾಡುತ್ತಾನೆ. ಶನಿ ದೇವನ ಕೆಡುಕಿನಿಂದ ಪಾರಾಗಬೇಕಾದರೆ ಶನಿವಾರಗಳಂದು ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವಾಗ ದೀಪಕ್ಕೆ ಒಂದು ಲವಂಗವನ್ನೂ ಹಾಕಿ. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಶನಿಯಿಂದಾಗಬಹುದಾದ ತೊಂದರೆಗಳು ನಿವಾರಣೆಯಾಗುತ್ತದೆ. ನಮ್ಮ ಆರ್ಥಿಕ ಸಂಕಷ್ಟಗಳೂ ಪರಿಹಾರವಾಗುತ್ತದೆ ಎಂಬುದು ನಂಬಿಕೆ.