Publish Date: Fri, 23 Jul 2021 (09:34 IST)
Updated Date: Fri, 23 Jul 2021 (09:37 IST)
ತಿರುವನಂತಪುರ (ಜು.23): ವರದಕ್ಷಿಣೆ ಪಡೆಯುವ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ವರದಕ್ಷಿಣೆ ಪಡೆಯಲ್ಲ, ವರದಕ್ಷಿಣೆ ಕೊಡಲ್ಲ ಎಂಬ ಬಾಂಡ್ ಅನ್ನು ಕೇರಳ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
•ವರದಕ್ಷಿಣೆ ಪಡೆಯುವ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಳ
•ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ವರದಕ್ಷಿಣೆ ಪಡೆಯಲ್ಲ, ವರದಕ್ಷಿಣೆ ಕೊಡಲ್ಲ ಎಂಬ ಬಾಂಡ್
•ಬಾಂಡ್ ಅನ್ನು ಕೇರಳ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ
ವರದಕ್ಷಿಣೆ ವಿರುದ್ಧ ಸಮರ ಸಾರಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಸಂಬಂಧ ಸಲಹೆ ನೀಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೂ ಚರ್ಚೆ ನಡೆಸಿದ್ದಾರೆ. ತಾವು ನೀಡಿದ ವರದಕ್ಷಿಣೆ ವಿರೋಧಿ ಬಾಂಡ್ ಸಲಹೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಆಸಕ್ತಿ ತೋರಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟುಕುಲಪತಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ವರದಕ್ಷಿಣೆ ಬಾಂಡ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
21 ಆಮೆ, ಲ್ಯಾಬ್ರಡಾರ್ ವರದಕ್ಷಿಣೆ ಕೇಳಿದ ವರ..!
ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಪದವಿಗಳು ವರದಕ್ಷಿಣೆ ಕೇಳಲು ಲೈಸೆನ್ಸ್ ಆಗಬಾರದು. ಯಾರೇ ಆಗಲಿ ಕಾಲೇಜಿಗೆ ಪ್ರವೇಶ ಪಡೆಯುವಾಗ, ವರದಕ್ಷಿಣೆ ಪಡೆಯಲ್ಲ ಅಥವಾ ಕೊಡಲ್ಲ ಎಂಬ ಬಾಂಡ್ಗೆ ಸಹಿ ಮಾಡಿಕೊಡಬೇಕು. ವರದಕ್ಷಿಣೆ ಎಂಬುದು ಶಿಕ್ಷಾರ್ಹ ಅಪರಾಧ. ಹೀಗಾಗಿ ವಿವಿಗಳು ಈ ಕುರಿತು ಬಾಂಡ್ ಕೇಳಿದರೆ ಕಾನೂನು ಎತ್ತಿ ಹಿಡಿದಂತಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ವರದಕ್ಷಿಣೆ ವಿರೋಧಿಸಿ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಪಾಲರು ಜು.14ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ಗಮನಸೆಳೆದಿದ್ದರು