Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ವಿಜಯಪುರ ಜಿಲ್ಲೆಯ ಇಂಡಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಾಕಷ್ಟು ಗೊಂದಲ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಗಂಧ ಗಾಳಿ ಗೊತ್ತಿರದಿರುವವರು ಕೂಡಾ ಆ ಪಟ್ಟಿಯಲ್ಲಿ ಇದ್ದಾರೆ. ಮಾದ್ಯಮದಲ್ಲಿ ಬಂದಿರುವ ಪಟ್ಟಿ ಗೊಂದಲ ಸೃಷ್ಟಿಸುತ್ತಿದೆ. ಪಕ್ಷಕ್ಕಾಗಿ ಕೆಲಸ ಮಾಡಿದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ಕೊಟ್ಟರೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಕ್ಷರು ಕೂಡಾ ಇದಕ್ಕೆ ಸಮ್ಮತಿ ನೀಡಿದ್ದಾರೆ. ಮತಕ್ಷೇತ್ರದ ಜನ ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು. ರಾಷ್ಟ್ರೀಯ ಹಾಗೂ ರಾಜ್ಯಾದ್ಯಕ್ಷರು ಘೋಷಣೆ ಮಾಡಿದ ಅಭ್ಯರ್ಥಿಗಳಿಗೆ ನಾವು ಬೆಂಬಲಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿಕಾಂತ್ ಬಗಲಿ ಹೇಳಿದ್ದಾರೆ
ಮಾಜಿ ಶಾಸಕ ರವಿಕಾಂತ ಪಾಟೀಲಗೂ ಬಿಜೆಪಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ಪಕ್ಷದ ಅಬ್ಯರ್ಥಿ ಕೂಡಾ ಅಲ್ಲ. ರವಿಕಾಂತ ಪಾಟೀಲರ ಪುತ್ರ ಯುವ ಮೋರ್ಚಾ ರಾಜ್ಯ ಪಧಾಧಿಕಾರಿಯಾಗಿದ್ದಾರೆ. ಆದರೆ ರವಿಕಾಂತ ಪಾಟೀಲರಿಗೂ ಪಕ್ಷಕ್ಕೆ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ರವಿಕಾಂತ್ ಪಾಟೀಲ್ ತಾವೇ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದು ಇಂಡಿ ಮತಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ರವಿಕಾಂತ ಪಾಟೀಲರಿಗೆ ನೋಟಿಸ್ ಕೊಡಬೇಕು ಎಂದರೆ ಅವರು ಪಕ್ಷದ ಸದಸ್ಯನ ಅಲ್ಲ. ಈ ಹಿನ್ನಲೆಯಲ್ಲಿ ಅವರಿಗೆ ನೋಟಿಸ್ ಕೊಡುತ್ತಿಲ್ಲ. ರವಿಕಾಂತ ಪಾಟೀಲ್ ಅಥವಾ ಬೇರಾರಿಗೆ ಟಿಕೇಟ್ ಕೊಟ್ಟರೆ ಬಂಡಾಯದ ಭಾವುಟ ಹಾರಿಸುವದು ಖಚಿತ ಎಂದು ಗುಡುಗಿದ್ದಾರೆ.
ಪಕ್ಷಕ್ಕಾಗಿ ದುಡಿದ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ಕೊಟ್ಟರೂ ಅದಕ್ಕೆ ನಮ್ಮ ಬೆಂಬಲವಿದೆ ಎಂದು.ಮಾದ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕಾಂತ ಬಗಲಿ ಹೇಳಿಕೆ ನೀಡಿದ್ದಾರೆ.