Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ದಸರಾ ಮತ್ತು ಆಯುಧಪೂಜೆ ಹಿನ್ನೆಲೆ ನಗರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿನ್ನೆಲೆ ನಾಳೆ ನಾಡಿದ್ದು ಇನ್ನಷ್ಟು ದರ ಏರಿಕೆ ಸಾಧ್ಯತೆ ಇದ್ದು, ಇಂದೇ ಜನ ಖರೀದಿಗೆ ಮುಂದಾಗಿದ್ದಾರೆ.
ಹಬ್ಬದ ದಿನಗಳು ಹತ್ತಿರ ಬಂದರೆ ಸಾಕು ಜನಸಾಮಾನ್ಯರ ಜೇಬಿಗೆ ಹೊರೆ ಬೀಳುವುದು ಸಾಮಾನ್ಯ. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ.
ಅದರಂತೆ ಈ ಬಾರಿಯ ಆಯುಧಪೂಜೆ ದಸರಾಗೂ ದರ ಏರಿಕೆಯಾಗಿದ್ದು, ಹಬ್ಬಕ್ಕೆ ಎರಡು ದಿನ ಮುನ್ನವೆ ಖರೀದಿ ಕೂಡ ಜೋರಾಗಿದೆ.
ಈ ಬಾರಿ ಆಯುಧಪೂಜೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಸಾಮಾನ್ಯವಾಗಿ ಆಯುಧಪೂಜೆ ಸಂದರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆಗೆ, ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ದುಪ್ಪಟ್ಟಾಗಿದೆ.
ಹೂವಿನ ಬೆಲೆ ಕೆಜಿಗೆ ಎಷ್ಟು?
ಮಲ್ಲಿಗೆ ಹೂ – 1000 ಸಾವಿರ ರೂ.
ಸೇವಂತಿಗೆ – 300-500 ರೂ.
ಚೆಂಡು ಹೂ – 150 ರೂ .
ಕನಕಾಂಬರ – 3 ಸಾವಿರ
ಸುಗಂಧರಾಜ – 400 ರೂ.
ಕಾಕಡ – 700-800 ರೂ.
ಕೇವಲ ಹೂ ಮಾತ್ರ ಅಲ್ಲ. ಈ ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದರೆ ಕುಂಬಳಕಾಯಿ ಹಾಗೂ ಬಾಳೆ ಕಂಬ. ಇವುಗಳ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂ. ಗೆ ಏರಿಕೆ ಆಗಿದೆ.