Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ್ ನಡಹಳ್ಳಿ ಮಧ್ಯದ ಚುನಾವಣಾ ಕದನ ಕಣ ತಾರಕಕ್ಕೇರಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ನಾಡಗೌಡ ಅವರು ನಡಹಳ್ಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರ ಬಿಟ್ಟು, ಜೆಡಿಎಸ್ ಸೆರ್ಪಡೆಗೊಂಡು ಅವರಿಗೂ ಕೈಕೊಟ್ಟು ಇದೀಗ ಬಿಜೆಪಿ ಸೆರ್ಪಡೆಗೊಂಡು ತಮ್ಮ ವಿರುದ್ಧ ಸ್ಪರ್ಧಿಸಿರುವ ನಡಹಳ್ಳಿ ಮತಕ್ಷೇತ್ರದ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಮತಕ್ಷೇತ್ರದಲ್ಲಿ ಮೂವತ್ತು ವರ್ಷದಿಂದ ದುರಾಡಳಿತದ ಕಾರಣಕ್ಕಾಗಿ ಅರಾಜಕತೆ ಇದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮತಕ್ಷೇತ್ರದಲ್ಲಿನ ಅಧಿಕಾರಿಗಳಿಗೆ ಹಾಗೂ ವಿವಿಧ ಸಮಾಜಗಳ ಮುಖಂಡರುಗಳಿಗೆ ನಾನೇ ಅಧಿಕಾರಕ್ಕೆ ಬರುತ್ತೇನೆ ಎಂದು ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನೆಂದೂ ಇಂತಹ ರಾಜಕೀಯ ಕೃತ್ಯಕ್ಕೆ ಕೈ ಹಾಕಿಲ್ಲ, ಯಾರಿಂದಲೂ ಒಂದು ನಯಾಪೈಸೆ ಮುಟ್ಟಿಲ್ಲ ಎಂದ ನಾಡಗೌಡ, ನಡಹಳ್ಳಿ ಪ್ರಸ್ತುತ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ, ಆ ಪಕ್ಷದ ಘನತೆಗೆ ಕುಂದುಂಟಾಗದಂತೆ ರಾಜಕಾರಣ ಮಾಡಲಿ. ಇಲ್ಲವಾದಲ್ಲಿ ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ನಮಗೂ ಇದೆ ಎಂದು ಎಚ್ಚರಿಕೆ ನೀಡಿದರು.
ನಡಹಳ್ಳಿ ಸುಳ್ಳು ಆರೋಪಗಳನ್ನ ಅಸಂವಿಧಾನಿಕ ಮಾತುಗಳನ್ನ, ಬೆದರಿಕೆ ಕರೆಗಳನ್ನ ರೆಕಾರ್ಡ್ ಮಾಡಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದ ನಾಡಗೌಡರು, ಅವುಗಳನ್ನ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳಲು ಹಾಗೂ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ನಡಹಳ್ಳಿ ಬಂಡವಾಳ ಬಯಲು ಮಾಡೋಣ ಎಂದು ಕರೆ ನೀಡಿದ್ದಾರೆ.