Publish Date: Sat, 20 Nov 2021 (09:13 IST)
Updated Date: Sat, 20 Nov 2021 (09:35 IST)
ಹೊಸದಿಲ್ಲಿ : ದಿಲ್ಲಿ ವಾಯುಮಾಲಿನ್ಯದ ಕುರಿತು ವಸ್ತುಸ್ಥಿತಿಯಾಚೆಗಿನ ಅಭಿಪ್ರಾಯಗಳನ್ನು ಮಂಡಿಸುತ್ತಿರುವ ಟಿವಿ ಚಾನೆಲ್ಗಳ ಚರ್ಚೆಗಳ ವಿರುದ್ಧ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿವಿ ವಾಹಿನಿಗಳಲ್ಲಿನ ಸಂವಾದಗಳು ಎಲ್ಲಕ್ಕಿಂತಲೂ ಹೆಚ್ಚು ಮಾಲಿನ್ಯ ಉಂಟುಮಾಡುತ್ತಿವೆ ಎಂದು ಸಿಜೆಐ ಟೀಕಿಸಿದ್ದಾರೆ. ನ್ಯಾಯಾಲಯ ಕಂಡುಕೊಳ್ಳುವ ಸಣ್ಣಪುಟ್ಟ ಸಂಗತಿಗಳನ್ನೂ ದೊಡ್ಡ ವಿವಾದವನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದಿಲ್ಲಿ ವಾಯು ಮಾಲಿನ್ಯ ಪರಿಸ್ಥಿತಿಯ ಕುರಿತು ವಿದ್ಯಾರ್ಥಿಯೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ಸಿಜೆಐ ಎನ್ವಿ ರಮಣ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ನೀವು ಕೆಲವು ವಿವಾದಗಳನ್ನು ಬಳಸಲು, ನಾವು ಅದನ್ನು ಗಮನಿಸಲು ಹಾಗೂ ಬಳಿಕ ಅದನ್ನು ವಿವಾದವನ್ನಾಗಿಸಲು ಬಯಸುತ್ತೀರಿ. ನಂತರ ಕೆಸರೆರಚಾಟ ಒಂದೇ ಉಳಿಯುತ್ತದೆ. ಎಲ್ಲರಿಗಿಂತಲೂ ಟಿವಿ ಚಾನೆಲ್ಗಳ ಚರ್ಚೆಗಳು ಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿವೆ' ಎಂದು ಕಿಡಿಕಾರಿದ್ದಾರೆ.
ದಿಲ್ಲಿ ವಾಯು ಮಾಲಿನ್ಯಕ್ಕೆ ಕೂಳೆ ಸುಡುವುದರ ಕೊಡುಗೆ ಇದೆ ಎಂಬ ವಿಚಾರದಲ್ಲಿ ಟೆಲಿವಿಷನ್ ಚರ್ಚೆಗಳು ಸುಪ್ರೀಂಕೋರ್ಟ್ ಅನ್ನು ದಾರಿತಪ್ಪಿಸುತ್ತಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಸ್ತಾಪಿಸಿದರು. ಇದಕ್ಕೆ ಸಿಜೆಐ, 'ನಮ್ಮನ್ನು ತಪ್ಪುದಾರಿಗೆ ಎಳೆಯುತ್ತಿಲ್ಲ' ಎಂದರು.