Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಮರಾವತಿ : `ಮಂಗಳಯಾನದ ಕಕ್ಷೆಗಾಮಿ ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ಬಳಿಕ ಇಂಧನ ಖಾಲಿಯಾಗಿದೆ.
ಅದರ ಬ್ಯಾಟರಿ ಸುರಕ್ಷಿತ ಮಿತಿಯನ್ನು ಮೀರಿದ್ದು, ದೇಶದ ಚೊಚ್ಚಲ ಉಪಗ್ರಹ ಮಿಷನ್ ಮಂಗಳಯಾನ ತನ್ನ ಸುದೀರ್ಘ ಪಯಣವನ್ನು ಪೂರ್ಣಗೊಳಿಸಿದೆ.
ಸುಮಾರು 450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು 2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ ಪಿಎಸ್ಎಲ್ವಿ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು.
2014 ಸೆಪ್ಟೆಂಬರ್ 24ರಂದು ಮಿಷನ್ ಮಾರ್ಸ್ ಆರ್ಬಿಟರ್ ಮಿಷನ್ ಮಂಗಳ ಕಕ್ಷೆಗೆ ಸೇರಿತು. ಸದ್ಯ ಉಪಗ್ರಹದಲ್ಲಿ ಇಂಧನ ಹಾಗೂ ಬ್ಯಾಟರಿ ಖಾಲಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಆದರೆ ಇಸ್ರೋದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಭಾರತದ `ಮಂಗಳಯಾನ ಉಪಗ್ರಹವು 8 ವರ್ಷ ಪೂರ್ಣಗೊಳಿಸಿದೆ. ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ತನ್ನ ಅವಧಿ ಮೀರಿ ಕಾರ್ಯನಿರ್ವಹಿಸಿದೆ.