Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳು ಪೆಂಡಿಂಗ್ ಇದೆ.
ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಕಮಿಟಿ ಮಾಡಿದ್ದೀರಿ, ಇನ್ನೂ ವರದಿ ನೀಡಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಗೆ ಈಶ್ವರಪ್ಪ ಉತ್ತರಿಸುವಾಗ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಈ ಹಿಂದೆ ಕ್ಯಾಬಿನೆಟ್ ಸಬ್ ಕಮಿಟಿ ಆಗಿತ್ತು,
ನಾನೂ ಕೂಡ ಸದಸ್ಯನಾಗಿದ್ದೆ , ರವಿವರ್ಮಕುಮಾರ್ ಜೊತೆ ಕೂತು ಫಾರ್ಮುಲಾ ರೆಡಿ ಮಾಡಿದ್ದೆವು. ಅದರ ಪ್ರಕಾರ 26.4% ಬಿಸಿಎಂಎ, 6.6%ಬಿಸಿಎಂಬಿ ಮಾಡಿ, 33% ಮಹಿಳೆಯರಿಗೆ ಮಾಡಿತ್ತು. ಬಳಿಕ ಮಹಿಳೆಯರಿಗೆ 50% ಆಯ್ತು. 30% ಈಗ ಹಿಂದುಳಿದವರಿಗೆ ನೀಡಲಾಗಿದೆ.
ಇದೆಲ್ಲ ಹೋಗಿ ಜನರಲ್ ಕ್ಯಾಟಗಿರಿಯವರು ಹೋಗಬೇಕಿದೆ. ಇದಕ್ಕೆ ಸರ್ಕಾರ ಏನು ಯೋಜನೆ ಮಾಡಿದ್ದೀರಾ ಅಂತ ಪ್ರಶ್ನೆ..? ಹಿಂದುಳಿದ ಜಾತಿಯವರಿಗೆ ರಾಜಕೀಯ ಮೀಸಲಾತಿಯಲ್ಲಿ ಅನ್ಯಾಯ ಆಗಬಾರದು. ಕರ್ನಾಟಕದಲ್ಲಿ 33%ಮೀಸಲಾತಿ ಇದೆ.
ಎಸ್.ಟಿ. 3%, 15% ಎಸ್ಸಿ, 33% ಹಿಂದುಳಿದ ವರ್ಗ. ಒಟ್ಟು 51% ಮೀಸಲಾತಿ ಇದೆ. ರಿಸರ್ವೇಷನ್ ಇಲ್ಲದಿದ್ರೆ ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗಲಿದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.
ಆಗ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಸಚಿವ ಈಶ್ವರಪ್ಪ ಉತ್ತರ ನೀಡಿ, ತಾ.ಪಂ, ಜಿ.ಪಂ ಚುನಾವಣೆ ಹೇಗೆ ನಡೆಯಬೇಕು ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ನಿಟ್ಟಿನಲ್ಲಿ ಏನೇನು ಮಾಡಬೇಕು ಅಂತಾ ನಾಲ್ಕು ಬಾರಿ ಕಾನೂನು ಸಚಿವರು, ಕ್ಯಾಬಿನೆಟ್ ಸಚಿವರ ಸಭೆ ನಡೆಸಲಾಗಿತ್ತು.
ಸರ್ವ ಪಕ್ಷ ಸಭೆ ಕೂಡ ಮಾಡಲಾಗಿದೆ, ವಿಪಕ್ಷ ನಾಯಕರು ಮತ್ತೆ 31ರಂದು ಸರ್ವಪಕ್ಷ ಸಭೆ ಕರೆಯಲು ಮನವಿ ಮಾಡಿದ್ದಾರೆ. ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗಬಾರದು, ಈ ಚುನಾವಣೆ ಸಂದರ್ಭದಲ್ಲಿ ಆಡಳಿತ, ವಿಪಕ್ಷ ಅಂತ ಪಕ್ಷ ನೋಡಲು ಆಗಲ್ಲ. 31ರಂದು ಎಲ್ಲರೂ ಕೂತು ಚರ್ಚೆ ಮಾಡೋಣ. ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳೋಣ, ನಂತರ ಚುನಾವಣೆಗೆ ಹೋಗೋಣ ಅಂತಾ ಈಶ್ವರಪ್ಪ ಸ್ಪಷ್ಟನೆ ನೀಡಿದ್ರು.