Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಉಕ್ರೇನ್ನಲ್ಲಿ ರಷ್ಯಾ ರಕ್ತದೋಕುಳಿ ನಡೆಸುತ್ತಿದೆ. ರಷ್ಯಾ ಸೈನಿಕರ ರಾಕ್ಷಸೀ ಕೃತ್ಯಕ್ಕೆ 25ಕ್ಕೂ ಹೆಚ್ಚು ದೇಶಗಳು ಕೆಂಡಾಮಂಡಲವಾಗಿವೆ.
ವಿಶ್ವದೆಲ್ಲೆಡೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪರ್ಯಾಸ ಅಂದ್ರೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ನಡೆಯನ್ನು ರಷ್ಯಾ ಪ್ರಜೆಗಳೇ ತೀವ್ರವಾಗಿ ಖಂಡಿಸಿದ್ದಾರೆ.
ನಮ್ಮದೇ ಸಂಸ್ಕೃತಿಯ, ನಮ್ಮದೇ ಭಾಷಿಕರ ದೇಶ ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸಿ ಎಂದು ಸಾವಿರಾರು ರಷ್ಯನ್ನರು ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವ ಕೆಲಸವನ್ನು ರಷ್ಯಾ ಸರ್ಕಾರ ಮಾಡುತ್ತಿದೆ. ಮಹಿಳೆಯರು ಎನ್ನುವುದನ್ನು ನೋಡದೇ ಕೂದಲಿಡಿದು ಕ್ರೌರ್ಯ ಮೆರೆದಿದೆ.
ಉಕ್ರೇನ್ ಸರ್ಕಾರದ ಮೇಲೆ ದಾಳಿಗೆ ಪುಟಿನ್ ಆದೇಶ ನೀಡಿದ್ದಾರೆ. ಶರಣಾಗಲು ಅಧ್ಯಕ್ಷರಿಗೆ ಕರೆ ನೀಡಿದ್ದಾರೆ. ಆದರೆ ಹೋರಾಟವನ್ನು ನಿಲ್ಲಿಸಿ ಶಸ್ತ್ರತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಎಂತಹ ಪರಿಸ್ಥಿತಿ ಬಂದರೂ ಕೀವ್ ಬಿಟ್ಟುಕೊಡಲ್ಲ.
ನಮ್ಮ ಸೈನಿಕರು ವಿರೋಚಿತವಾಗಿ ಹೋರಾಡುತ್ತಿದ್ದಾರೆ. ನಮ್ಮವರು ರಷ್ಯಾದ ಸಾವಿರಾರು ಸೈನಿಕರನ್ನು ಕೊಂದಿದ್ದಾರೆ. ಈ ಹಂತದಲ್ಲಿ ನಮ್ಮವರನ್ನು ನಾವು ಕಳೆದಕೊಂಡಿದ್ದೇವೆ. ಆದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇವತ್ತೊಂದು ರಾತ್ರಿ ಧೈರ್ಯವಾಗಿರಿ ಎಂದು ಝೆಲೆನ್ಸ್ಕಿ ದೇಶದ ಜನೆತೆಗೆ ಕರೆ ನೀಡಿದ್ದಾರೆ.
ಈ ಮಧ್ಯೆ, ಉಕ್ರೇನ್ ನೆರವಿಗೆ ಪೊಲೆಂಡ್ ಧಾವಿಸುವ ಮುನ್ಸೂಚನೆ ನೀಡಿದೆ. ರಷ್ಯಾದ ಕ್ರಮವನ್ನು ಬಹಿರಂಗವಾಗಿ ಖಂಡಿಸಿದೆ. ವಿಶ್ವಸಂಸ್ಥೆ 150 ಕೋಟಿ ರೂಪಾಯಿ ನೆರವು ಪ್ರಕಟಿಸಿದೆ.