Publish Date: Mon, 15 Aug 2022 (08:16 IST)
Updated Date: Mon, 15 Aug 2022 (12:21 IST)
ನವದೆಹಲಿ : ಬ್ರಿಟಿಷರ ಕಪಿಮುಷ್ಠಿ, ದಬ್ಬಾಳಿಕೆ, ದೌರ್ಜನ್ಯದಿಂದ ದೇಶ ಮುಕ್ತಿಗೊಂಡು ಇಂದಿಗೆ 75 ವರ್ಷಗಳು.
ಈ ಹಿನ್ನೆಲೆಯಲ್ಲಿ, 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವವನ್ನು ದೇಶಾದ್ಯಂತ ಐತಿಹಾಸಿಕ, ಸ್ಮರಣಾತ್ಮಕವಾಗಿ ಆಚರಿಸಲಾಗ್ತಿದೆ.
ಪ್ರತಿ ಭಾರತೀಯನೂ ಹೆಮ್ಮೆಯಿಂದ ಸಂಭ್ರಮಿಸುವಂತಹ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಿಸುವ ದಿನ. ಪ್ರಧಾನಿ ಮೋದಿ ಅವರ `ಹರ್ ಘರ್ ತಿರಂಗ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ಸಿಕ್ಕಿದ್ದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಹಾರಾಡ್ತಿದೆ.
ಈಗಾಗಲೇ ಟ್ವಿಟರ್ನಲ್ಲಿ ದೇಶವಾಸಿಗಳಿಗೆ ಅಮೃತೋತ್ಸವದ ಶುಭಾಶಯ ಕೋರಿರುವ ಪ್ರಧಾನಿ ಮೋದಿ, ಇದೊಂದು ಅತ್ಯಂತ ವಿಶೇಷವಾದ ಸ್ವಾತಂತ್ರ್ಯೋತ್ಸವ. ಜೈ ಹಿಂದ್ ಅಂತ ಟ್ವೀಟ್ ಮಾಡಿದ್ದಾರೆ. ಇತ್ತ ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸತತ 9ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ಬಳಿಕ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಭಾಷಣದ ಮೇಲೆ ಹಲವು ನಿರೀಕ್ಷೆಗಳನ್ನು ದೇಶವಾಸಿಗಳು ಇಟ್ಟುಕೊಂಡಿದ್ದಾರೆ. ಅಮೃತ ಮಹೋತ್ಸವ ಹೊತ್ತಲ್ಲಿ ವಿಶೇಷ ಘೋಷಣೆ ಮಾಡುವ ಸಾಧ್ಯತೆ ಇದೆ.