Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ನಟ ಸುದೀಪ್ ಮತ್ತು ಕಲರ್ಸ್ ವಾಹಿನಿ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದರೊಂದಿಗೆ ಆರಂಭಕ್ಕೂ ಮೊದಲೇ ಬಿಗ್ ಬಾಸ್ ವಿವಾದಕ್ಕೀಡಾಗಿದೆ. ಕಳೆದ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಮಾಳವಿಕಾರನ್ನು ಸೀಕ್ರೆಟ್ ರೂಂಗೆ ಬಿಡುವಾಗ ಪರಮೇಶ್ವರ್ ಗುಂಡ್ಕಲ್ ಮುತ್ತು ಕೊಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಅಕ್ಟೋಬರ್ 15 ರಿಂದ ಬಿಗ್ ಬಾಸ್ 5 ನೇ ಆವೃತ್ತಿ ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಬಿಗ್ ಬಾಸ್ ಮನೆಯಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ. ಮಾಳವಿಕಾಗೆ ಧೈರ್ಯ ತುಂಬಿ ಪರಮೇಶ್ವರ್ ತಬ್ಬಿ, ಸ್ನೇಹಪೂರ್ವಕವಾಗಿ ಮುತ್ತಿಕ್ಕಿದ್ದಾರಷ್ಟೇ. ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.
ಒಂದು ವೇಳೆ ಅನೈತಿಕ ಚಟುವಟಿಕೆ ನಡೆದರೆ ನಾನು ಅಲ್ಲಿರುವುದಿಲ್ಲ. ನಮಗೂ ಸಾಮಾಜಿಕ ಜವಾಬ್ದಾರಿಯಿದೆ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್ ಕೂಡಾ ಇದೆಲ್ಲಾ ಒಳಗಿನ ಶತ್ರುಗಳದ್ದೇ ಕೆಲಸ ಎಂದಿದ್ದಾರೆ. ಅದೇನೇ ಇರಲಿ, ಆರಂಭಕ್ಕೂ ಮೊದಲೇ ಬಿಗ್ ಬಾಸ್ ವಿವಾದದ ಮೂಲಕ ಸುದ್ದಿಯಾಗಿದ್ದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ