Publish Date: Thu, 01 Jun 2023 (14:47 IST)
Updated Date: Thu, 01 Jun 2023 (13:39 IST)
ನವದೆಹಲಿ : ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳ ತನಿಖೆಯನ್ನು ಸಿಬಿಐ ವಿಶೇಷ ತಂಡ ನಡೆಸಲಿದ್ದು, ಇದರ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಂಫಾಲ್ ಪ್ರವಾಸದಲ್ಲಿರುವ ಅಮಿತ್ ಶಾ ಸರ್ವಪಕ್ಷಗಳ ಸಭೆ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆಗಳನ್ನು ನಡೆಸಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಿಂಸಾತ್ಮಕ ಘಟನೆಗಳ ತನಿಖೆಗಾಗಿ ಮಣಿಪುರದಲ್ಲಿ ಹಲವಾರು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. 6 ಹಿಂಸಾಚಾರದ ಘಟನೆಗಳಲ್ಲಿ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಯಲಿದೆ. ಈ ತನಿಖೆ ನ್ಯಾಯಯುತವಾಗಿರಲಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಶಾ ಹೇಳಿದರು.
ಸಂಘರ್ಷದಿಂದ ಸಂತ್ರಸ್ತರಾದವರಿಗೆ ಪರಿಹಾರ ಮತ್ತು ಪುನರ್ವಸತಿಯನ್ನು ಸಿದ್ಧಪಡಿಸಲಾಗಿದೆ. ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ತಲಾ 5 ಲಕ್ಷ ರೂ. ನೀಡುತ್ತೇವೆ. ಮಣಿಪುರದ ರಾಜ್ಯಪಾಲರು ನಾಗರಿಕ ಸಮಾಜದ ಸದಸ್ಯರನ್ನೊಳಗೊಂಡ ಶಾಂತಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಅವರು ತಿಳಿಸಿದರು.