Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಜಗತ್ತಿನ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರವಾದ ಇಂಡೋನೇಷ್ಯಾ, ಸ್ಥಳೀಯ ಎಣ್ಣೆ ಕೊರತೆ ಪೂರೈಸಲು ಏ.28 ರಿಂದ ವಿದೇಶಗಳಿಗೆ ಖಾದ್ಯತೈಲ ರಫ್ತು ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ.
ಹೀಗಾಗಿ ಈಗಾಗಲೇ ಉಕ್ರೇನ್-ರಷ್ಯಾ ಯುದ್ಧದ ಕಾರಣದಿಂದಾಗಿ ಗಗನಕ್ಕೇರಿರುವ ಇನ್ನಷ್ಟುಏರಿಕೆಯಾಗುವ ಭೀತಿ ಎದುರಾಗಿದೆ.
ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಹಣದುಬ್ಬರದಲ್ಲಿ ದಾಖಲೆಯ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ತಮ್ಮ ದೇಶದ ನಾಗರಿಕರಿಗೆ ಆಹಾರೋತ್ಪನ್ನಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ತಾಳೆಎಣ್ಣೆಯ ರಫ್ತಿನ ಮೇಲೆ ನಿರ್ಬಂಧ ಹೇರಿದ್ದಾರೆ.
ಇದರಿಂದಾಗಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಂತಹ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಭಾರೀ ಹೊಡೆತ ಬೀಳಲಿದೆ. ಇಂಡೋನೇಷ್ಯಾ ನಿರ್ಬಂಧ ಹೇರಿದ್ದ ಕಾರಣ ದೇಶದಲ್ಲಿ ಪ್ರತಿ ತಿಂಗಳು 40 ಲಕ್ಷ ಟನ್ ತಾಳೆ ಎಣ್ಣೆಯ ಕೊರತೆಯುಂಟಾಗಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿರುವ ಜಗತ್ತಿನ 2 ನೇ ಅತಿದೊಡ್ಡ ಅಡುಗೆ ಎಣ್ಣೆ ಉತ್ಪಾದಕ ರಾಷ್ಟ್ರ ಮಲೇಷ್ಯಾಗೆ ಈ ಕೊರತೆಯನ್ನು ನೀಗಿಸುವುದು ಅಸಾಧ್ಯವಾಗಿದೆ.
ಈ ಮೊದಲು ಉಕ್ರೇನ್ನಿಂದ ಆಮದು ಮಾಡಿಕೊಳ್ಳುತ್ತಿದ್ದ ಸೂರ್ಯಕಾಂತಿ ಎಣ್ಣೆಯೂ ಲಭ್ಯವಾಗದ ಹಿನ್ನೆಲೆಯಲ್ಲಿ ಏರಿಕೆಯಾದ ಖಾದ್ಯತೈಲದ ಬೆಲೆಯು ಇನ್ನಷ್ಟುಏರಿಕೆಯಾಗುವುದು ನಿಶ್ಚಿತವಾಗಿದೆ.