Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಸೀದಿಗಳ ಮೇಲೆ ಆಕ್ಷೇಪಾರ್ಹ ಬರಹಗಳು ಹಾಗೂ ವಸ್ತುಗಳನ್ನು ಎಸೆದು ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ 7 ಮಂದಿ ಕಿಡಿಗೇಡಿಗಳನ್ನು ಉತ್ತರ ಪ್ರದೇಶದ ಅಯೋಧ್ಯೆ ಪೊಲೀಸರು ಬಂಧಿಸಿದ್ದಾರೆ.
ಅಯೋಧ್ಯೆ ನಿವಾಸಿಗಳಾದ ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯುಶ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್, ಬ್ರಿಜೇಶ್ ಪಾಂಡೆ, ಶತ್ರುಘ್ಞ ಪ್ರಜಾಪತಿ ಹಾಗೂ ವಿಮಲ್ ಪಾಂಡೆ ಬಂಧಿತ ಆರೋಪಿಗಳು.
ಘಟನೆಯಲ್ಲಿ ಒಟ್ಟು 11 ಜನ ಭಾಗಿಯಾಗಿದ್ದು, 7 ಮಂದಿಯನ್ನು ಬಂಧಿಸಲಾಗಿದೆ ಉಳಿದ ನಾಲ್ವರು ಆರೋಪಿಗಳು ತಲೆಮಾರಿಸಿಕೊಂಡಿದ್ದು ಅವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದ ೮ ಆರೋಪಿಗಳು ಮಸೀದಿಯ ಹೊರಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಘಟನೆ ನಡೆದ ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೊಬೈಲ್ ಫೋನ್ ಹಾಗೂ ದ್ವಿಚಕ್ರವಾಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೆಹಲಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಗಲಭೆಗೆ ಪ್ರತೀಕಾರವಾಗಿ ಗಲಭೆ ನಡೆಸಲು ಈ ತಂಡ ಸಂಚು ರೂಪಿಸಿತ್ತು ಎಂದು ತಿಳಿದು ಬಂದಿದೆ.
ಮೊದಲು ಬೆನ್ನಿಗಂಜ್ ತಿಹಾರಾದಲ್ಲಿರುವ ಮಸೀದಿಯ ಬಳಿ ಹೋದಾಗ ಅಲ್ಲಿ ಪೊಲೀಸ್ ವಾಹನ ಇದಿದ್ದನ್ನು ನೋಡಿ ವಾಪಸ್ ತೆರಳಿದ್ದಾರೆ. ಆ ನಂತರ ಅಯೋಧ್ಯೆಯ ಕಾಶ್ಮೀರಿ ಮೊಹಲ್ಲಾ, ತತ್ಕಾ ಮಸೀದಿ, ಘೋಸಿಯಾನ ಮಸೀದಿ, ಈದ್ಗಾ ಸಿವಿಲ್ ಲೈನ್ ಮಸೀದಿ ಮತ್ತು ದರ್ಗಾ ಜೈಲ್ಲಿನ ಹಿಂಭಾಗದಲ್ಲಿರುವ ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಅಂಟಿಸಿ ಕೆಲವು ವಸ್ತುಗಳನ್ನು ಎಸೆದು ಹೋಗಿದ್ದಾರೆ ಎಂದು ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಬಂಧಿತ ಏಳು ಮಂದಿ ಪೈಕಿ ಮೂವರ ವಿರುದ್ದ ಈಗಾಗಲೇ ಹಲವು ಅಪರಾಧ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮುಖ್ಯ ಆರೋಪಿ ಮಹೇಶ್, ವಿಮಲ್ ಹಾಗೂ ನಿತನ್ ವಿರುದ್ದ ಈಗಾಗಲೇ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.