Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಈಗಾಗಲೇ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ರಾಜ್ಯಸಭೆಯಿಂದ ಆಯ್ಕೆ ಆಗಿರುವ ಅನೇಕ ಕೇಂದ್ರ ಸಚಿವರ ಹೆಸರು ಪಟ್ಟಿಯಲ್ಲಿಲ್ಲ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸದ್ಯದಲ್ಲೇ ಸಚಿವ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ. ಜೂ.10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಬಿಜೆಪಿಯೂ ಘೋಷಿಸಿದೆ. ಆದರೆ ಈಗಾಗಲೇ ಅನೇಕ ರಾಜ್ಯಸಭೆಯಿಂದ ಆಯ್ಕೆ ಆಗಿರುವ ಸಚಿವರಾಗಿರುವ ಅನೇಕರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿಲ್ಲ. ಬಿಜೆಪಿಯ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕೇಂದ್ರ ಅಲ್ಪಸಂಖ್ಯಾತರ ಸಚಿವ ಮುಖ್ತಾರ್ ಅಬ್ಬಾನಖ್ವಿ, ಪಕ್ಷದ ಹಿರಿಯ ನಾಯಕ ಒ.ಪಿ.ಮಾಥುರ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ಮ ಮತ್ತು ವಿನಯ್ ಸಹಸ್ರ ಬುದ್ಧೆ, ಮಾಜಿ ಕೇಂದ್ರ ಸಚಿವ ಶಿವ್ ಪ್ರತಾಪ್ ಶುಕ್ಲಾ ಸೇರಿದಂತೆ ಅನೇಕರು ರಾಜ್ಯಸಭೆಯಿಂದ ಆಯ್ಕೆಯಾಗಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು.
ಆದರೆ ಈ ಬಾರಿಯ ರಾಜ್ಯಸಭೆ ಚುನಾವಣೆಗೆ ಇವರ್ಯಾರಿಗೂ ಟಿಕೆಟ್ ನೀಡದೇ ಇರುವುದು ತೀವ್ರ ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ಕೇಂದ್ರದಲ್ಲಿ ಸಚಿವ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆಯಿದೆ.